ಸಾರಾಂಶ
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಮಾದಕ ದ್ರವ್ಯವು ಮನುಕುಲಕ್ಕೆ ಮಾರಕವಾಗಿದೆ. ಇದರಿಂದ ಯುವಕರ ಜೀವನವನ್ನೇ ಹಾಳಾಗುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಹಾಗಾಗಿ ಜನರು ಮಾದಕ ದ್ರವ್ಯದಿಂದ ದೂರವಿರಿ ಎಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಅರಿವು ಮೂಡಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಪ್ರಯುಕ್ತ ವಿಜಯನಗರ ಜಿಲ್ಲಾ ಪೊಲೀಸ್, ಕೂಡ್ಲಿಗಿ ಉಪವಿಭಾಗ, ಕೂಡ್ಲಿಗಿ ವೃತ್ತ ಹಾಗೂ ಕೂಡ್ಲಿಗಿ ಪೊಲೀಸ್ ಠಾಣಾ ಸಹಯೋಗದಲ್ಲಿ ಗುರುವಾರ ಬೆಳಗ್ಗೆ ನಡೆದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಯುವಕರು ದೇಶದ ಸಂಪತ್ತು. ಅವರು ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ದುಶ್ಚಟಕ್ಕೆ ದಾಸರಾಗದೇ ಆರೋಗ್ಯಕರ ಜೀವನ ಕಟ್ಟಿಕೊಳ್ಳಬೇಕು. ಮಾದಕ ಸೇವನೆಯಿಂದ ವ್ಯಸನಿಗಳಾಗಿ ತಮ್ಮ ಉಜ್ವಲ ಭವಿಷ್ಯ ಹಾಗೂ ನೆಮ್ಮದಿಯ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.ಕೂಡ್ಲಿಗಿ ವೃತ್ತ ನಿರೀಕ್ಷಕ ಪ್ರಹ್ಲಾದ್ ಆರ್. ಚನ್ನಗಿರಿ ಕೂಡ್ಲಿಗಿ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಕೊತ್ಲಮ್ಮ, ಕೂಡ್ಲಿಗಿ ಪಿಎಸ್ಐ ಸಿ. ಪ್ರಕಾಶ ಇತರರು ಮಾತನಾಡಿದರು. ಮಾದಕ ದ್ರವ್ಯ ವಸ್ತುಗಳಿಂದ ದೂರವಿರುವ ಬಗ್ಗೆ ಮಕ್ಕಳು ಸಂದೇಶ ಸಾರುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಜನರಲ್ಲಿ ಜಾಗೃತಿ ಮೂಡಿಸಿದರು. ಜಾಗೃತಿ ಜಾಥಾವು ಸರ್ಕಾರಿ ಜೂನಿಯರ್ ಕಾಲೇಜ್ ಮುಂದುಗಡೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಪಾದಗಟ್ಟೆ ಸರ್ಕಲ್ ಮೂಲಕ ಮದಕರಿ ಸರ್ಕಲ್ವರೆಗೆ ಸಾಗಿತು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.