ಜನಸಾಮಾನ್ಯರ ಅನುಭೂತಿ ಇಟ್ಟು ಸಾಹಿತ್ಯ ರಚಿಸಿದ ಡಿಸೋಜಾ

| Published : Jan 08 2025, 12:17 AM IST

ಸಾರಾಂಶ

ಡಿಸೋಜಾ ಅವರ ಎಲ್ಲ ಕತೆಗಳು ರೂಪಕಗಳೇ ಆಗಿವೆ. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ವಿಮರ್ಶಕರು ಅವರನ್ನು ಕಡೆಗಣಿಸಿದರೂ ಜನಸಾಮಾನ್ಯರು ಅವರ ಕತೆ, ಕಾದಂಬರಿಗಳನ್ನು ಇಷ್ಟಪಟ್ಟು ಓದಿದರು.

ಧಾರವಾಡ:

ನಾ. ಡಿಸೋಜಾ ಅವರು ಜನಸಾಮಾನ್ಯರ ಅನುಭೂತಿ ಇಟ್ಟುಕೊಂಡು ಕಥೆ, ಕಾದಂಬರಿ ರಚಿಸಿ ಜನಪ್ರಿಯ ಸಾಹಿತಿಯಾದರು ಎಂದು ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ ಹೇಳಿದರು.

ಮನೋಹರ ಗ್ರಂಥಮಾಲಾ ಅಟ್ಟದಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ನಡೆಸಿದ ನಾ. ಡಿಸೋಜಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಮುಳುಗಡೆ ಅವರ ಸಾಹಿತ್ಯದ ಸ್ಥಾಯಿವಸ್ತು. ಮುಳುಗಡೆ ಪ್ರದೇಶದ ಜನರ ಬದುಕು, ಬವಣೆ, ನೋವು, ನಲಿವುಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದು ವಿಶೇಷತೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ ಜನರ ಜೀವನದಲ್ಲಾದ ಬದಲಾವಣೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಬರೆದರು. ಅವರ ಹಲವು ಕತೆಗಳು, ಪ್ರಬಂಧಗಳು ಪಠ್ಯವಾಗಿವೆ. ಡಿಸೋಜಾ ಅವರ ಕಾದಂಬರಿ "ದ್ವೀಪ'''''''' ಸಿನೆಮಾ ಆಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಹೆಗ್ಗಳಿಕೆ ಎಂದರು.

ಡಿಸೋಜಾ ಅವರ ಎಲ್ಲ ಕತೆಗಳು ರೂಪಕಗಳೇ ಆಗಿವೆ. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ವಿಮರ್ಶಕರು ಅವರನ್ನು ಕಡೆಗಣಿಸಿದರೂ ಜನಸಾಮಾನ್ಯರು ಅವರ ಕತೆ, ಕಾದಂಬರಿಗಳನ್ನು ಇಷ್ಟಪಟ್ಟು ಓದಿದರು. ಸಾಹಿತ್ಯದ ಬಗ್ಗೆ ಅವರಿಗೆ ಆಳವಾದ ಜ್ಞಾನವಿರದಿದ್ದರೂ ಅವರನ್ನು ಶ್ರೇಷ್ಠ ಸಾಹಿತಿ ಎಂದು ಒಪ್ಪಿಕೊಂಡರು ಎಂದು ತಿಳಿಸಿದರು.

ಡಾ. ರಮಾಕಾಂತ ಜೋಶಿ ಮಾತನಾಡಿ, ನಾ. ಡಿಸೋಜಾ ಒಬ್ಬ ಸರಳ, ಸಜ್ಜನ ವ್ಯಕ್ತಿ. ಮನೋಹರ ಗ್ರಂಥಮಾಲೆ ಅವರ ಎರಡು ಕೃತಿ ಪ್ರಕಟಿಸಿದೆ. ಹಕ್ಕಿಗೂಂದು ಗೂಡು ಕೂಡಿ ಮತ್ತು "ಮುಳುಗಡೆ ಊರಿಗೆ ಬಂದವರು " ಮಕ್ಕಳ ಕಾದಂಬರಿಗಳನ್ನು ಮನೋಹರ ಗ್ರಂಥ ಮಾಲೆಯ ಅಂಗಸಂಸ್ಥೆಯಾದ ಜಡಭರತ ಪ್ರಕಾಶನದಿಂದ ಪ್ರಕಟಿಸಿದೆ. ನಾ. ಡಿಸೋಜಾ ಮತ್ತು ಗ್ರಂಥ ಮಾಲೆಯ ಸಂಬಂಧ ಕೇವಲ ಲೇಖಕ-ಪ್ರಕಾಶಕರ ಸಂಬಂಧವಾಗಿರದೆ, ಅದನ್ನು ಮೀರಿ ಆತ್ಮೀಯ ಗೆಳೆತನವನ್ನು ಹೊಂದಿತ್ತು ಎಂದರು.

ಡಾ. ಬಸು ಬೇವಿನಗಿಡದ, ಆನಂದ ಪಾಟೀಲ, ಡಾ. ಶಶಿಧರ ನರೇಂದ್ರ ಮಾತನಾಡಿದರು. ಡಾ. ಹ.ವೆಂ. ಕಾಖಂಡಿಕಿ ನಿರೂಪಿಸಿದರು. ಅರವಿಂದ ಕುಲಕರ್ಣಿ, ಲಿಂಗರಾಜ ಅಂಗಡಿ, ಜಯತೀರ್ಥ ಜಾಗೀರ್ದಾರ್, ಸಮೀರ ಜೋಶಿ ಇದ್ದರು.