ದುಬೈ ರಿಯಲ್‌ ಎಸ್ಟೇಟ್‌ ಎಕ್ಸ್‌ಪೋಗೆ ಅದ್ಧೂರಿ ಚಾಲನೆ

| N/A | Published : Jun 29 2025, 01:32 AM IST / Updated: Jun 29 2025, 09:57 AM IST

ಸಾರಾಂಶ

ಬೆಂಗಳೂರಿನಲ್ಲಿ ಪರ್ವ ರಿಯಲ್‌ ಎಸ್ಟೇಟ್‌ ಆಯೋಜಿಸಿರುವ ಎರಡು ದಿನಗಳ ದುಬೈ ರಿಯಲ್‌ ಎಸ್ಟೇಟ್ ಎಕ್ಸ್‌ ಪೋಗೆ ಶನಿವಾರ ಅದ್ಧೂರಿ ಚಾಲನೆ ದೊರೆತಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಪರ್ವ ರಿಯಲ್‌ ಎಸ್ಟೇಟ್‌ ಆಯೋಜಿಸಿರುವ ಎರಡು ದಿನಗಳ ದುಬೈ ರಿಯಲ್‌ ಎಸ್ಟೇಟ್ ಎಕ್ಸ್‌ ಪೋಗೆ ಶನಿವಾರ ಅದ್ಧೂರಿ ಚಾಲನೆ ದೊರೆತಿದೆ. ತಾಜ್‌ ವೆಸ್ಟ್‌ ಎಂಡ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ನೂರಾರು ಮಂದಿ ಆಗಮಿಸಿ, ದುಬೈನಲ್ಲಿ ಹೂಡಿಕೆಗಿರುವ ಅವಕಾಶಗಳ ಮಾಹಿತಿ ಪಡೆದರು.

ಕಾರ್ಯಕ್ರಮಕ್ಕೆ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ್‌ ಭಟ್‌ ಚಾಲನೆ ನೀಡಿದರು. ದುಬೈ ರಿಯಲ್ ಎಸ್ಟೇಟ್ ಎಕ್ಸ್‌ಪೋಗೆ ಭಾನುವಾರ ಸಂಜೆ 6 ಗಂಟೆಗೆ ತೆರೆ ಬೀಳಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವೇಶ್ವರ್‌ ಭಟ್‌, ‘ಬೆಂಗಳೂರಿನ ಅನೇಕರಿಗೆ ಈಗಾಗಲೇ ದುಬೈ ಎರಡನೇ ಊರು. ಹೀಗಾಗಿ ಅಲ್ಲೊಂದು ಸ್ವಂತ ಮನೆ ಹೊಂದುವುದು ಒಳ್ಳೆಯದು. ಅಲ್ಲಿರುವ ಅವಕಾಶ, ಸುರಕ್ಷತೆ ಕುರಿತು ಮಾತನಾಡುವ ಈ ಮೇಳ ಅತ್ಯಗತ್ಯವಾಗಿತ್ತು’ ಎಂದರು.

ಈ ವೇಳೆ ಮಾತನಾಡಿದ ರವಿ ಹೆಗಡೆ ಅವರು, ‘ಬೆಂಗಳೂರಿನ ದರದಲ್ಲಿಯೇ ದುಬೈನಲ್ಲಿ ಮನೆ ಕೊಳ್ಳಬಹುದು. ಬೆಂಗಳೂರಿಗಿಂತ ಹೆಚ್ಚು ಲಾಭ ಪಡೆಯಬಹುದು. ಇದನ್ನು ಬೆಂಗಳೂರಿಗೆ ತಿಳಿಸಲು ಹೊರಟಿರುವ ಪರ್ವ ಕಂಪನಿಯ ಪ್ರಯತ್ನಕ್ಕೆ ಯಶಸ್ಸು ಸಿಗಲಿ’ ಎಂದು ಶುಭ ಹಾರೈಸಿದರು.

ಪರ್ವ ರಿಯಲ್ ಎಸ್ಟೇಟ್‌ನ ಸಹಸಂಸ್ಥಾಪಕ ಶಶಿಧರ ನಾಗರಾಜಪ್ಪ ಮಾತನಾಡಿ, ‘ದುಬೈನಲ್ಲಿರುವ ಕನ್ನಡಿಗರ ಅನುಕೂಲಕ್ಕಾಗಿ ಪರ್ವ ಕಂಪನಿ ಆರಂಭಿಸಿದೆವು. ಇದನ್ನು ಸಮಸ್ತ ಕನ್ನಡಿಗರ ಅನುಕೂಲಕ್ಕಾಗಿ ಬೆಂಗಳೂರಿಗೆ ತಂದಿದ್ದೇವೆ. ದೂರದ ದುಬೈನಲ್ಲಿ ಕನ್ನಡಿಗರಿಗಿರುವ ಅವಕಾಶಗಳನ್ನು ಬಳಸಿಕೊಳ್ಳಲು ನಾವು ಸೇತುವೆಯಾಗುತ್ತೇವೆ. ಅಲ್ಲಿ ಹೂಡಿಕೆ ಮಾಡುವವರಿಗೆ ಅಲ್ಲಿನ ಸರ್ಕಾರವೇ ಬೆಂಬಲವಾಗಿ ನಿಲ್ಲಲಿದೆ’ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ವೈ.ಎ.ನಾರಾಯಣಸ್ವಾಮಿ, ಗುಬ್ಬಿಯ ಬಿಜೆಪಿ ಮುಖಂಡ ದಿಲೀಪ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read more Articles on