ಗುಡುಗು ಸಹಿತ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಹಸು ಮೃತಪಟ್ಟಿರುವ ಘಟನೆ ತಾಲೂಕಿನ ಮೆಣಜಿಬೋರನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲೇಟ್ ನಿಂಗೇಗೌಡರ ಪುತ್ರ ರವಿಕುಮಾರ್ ಅವರ 1 ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಹಸು ಪ್ರಾಣಾಪಾಯದಿಂದ ಪಾರಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗುಡುಗು ಸಹಿತ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಹಸು ಮೃತಪಟ್ಟಿರುವ ಘಟನೆ ತಾಲೂಕಿನ ಮೆಣಜಿಬೋರನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೇಟ್ ನಿಂಗೇಗೌಡರ ಪುತ್ರ ರವಿಕುಮಾರ್ ಅವರ 1 ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಹಸು ಪ್ರಾಣಾಪಾಯದಿಂದ ಪಾರಾಗಿದೆ.

ಎಂದಿನಂತೆ ತಮ್ಮ ರಾಸುಗಳನ್ನು ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ವೇಳೆ ಗುಡುಗು ಸಹಿತಿ ಭಾರೀ ಮಳೆಗೆ ಮನೆ ಮೇಲ್ಛಾವಣಿ ಸೇರಿದಂತೆ ಮನೆ ಗೋಡೆ ಕುಸಿದು ಹಸು ಮೇಲೆ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಹಸು ಮೃತಪಟ್ಟಿದ್ದು, ಮತ್ತೊಂದು ಹಸು ಕೂದಲೆಳೆ ಅಂತರದಲ್ಲಿ ಪಾರಾಗಿದೆ.

ಹಸು ಸಾಕಾಣಿಕೆ ಮಾಡಿ ಹಸುವಿನ ಹಾಲಿನಿಂದ ಬರುತ್ತಿದ್ದ ಹಣದಿಂದ ಜೀವನ ನಡೆಸುತ್ತಿದ್ದು, ಅಪಘಾತದಿಂದ ದಿಕ್ಕೇ ತೋಚದಂತಾಗಿದೆ. ತಾಲೂಕು ಆಡಳಿತ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ರೈತ ರವಿಕುಮಾರ್ ಒತ್ತಾಯಿಸಿದ್ದಾರೆ.

ಭಾರೀ ಮಳೆಗೆ ಮನೆಗೋಡೆ ಕುಸಿತದಿಂದ ಹಸು ಮೃತಪಟ್ಟರೂ ತಾಲೂಕು ಆಡಳಿತಕ್ಕೆ ವಿಷಯ ತಿಳಿಸಿದ್ದರೂ ಅಧಿಕಾರಿಗಳು ಸಕಾಲಕ್ಕೆ ಆಗಮಿಸಿ ಬಡ ರೈತರ ಸಂಕಷ್ಟಕ್ಕೆ ಮುಂದಾಗಿಲ್ಲ. ಇದರಿಂದ ಅಧಿಕಾರಿಗಳಿಗೆ ರೈತರ ಮೇಲಿರುವ ದೋರೆ ಎದ್ದು ತೋರಿತ್ತಿದೆ ಎಂದು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ.