ಕುಷ್ಟಗಿ: ತಾಲೂಕಿನ ಗುಮಗೇರಾ ಗ್ರಾಮದೇವತೆ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವ ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು.
ಜಾತ್ರಾಮಹೋತ್ಸವದ ಅಂಗವಾಗಿ ದೇವಿಯ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ, ಮಹಾಮಂಗಳಾರತಿ, ಅಗ್ನಿಹಾಯುವ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ಬೆಳಗ್ಗೆ ಭಕ್ತರು ದೇವಾಲಯದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ಸಂಜೆ ಸುಂದರವಾಗಿ ಅಲಂಕೃತಗೊಂಡ ಮಹಾರಥದಲ್ಲಿ ಶ್ರೀದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಭಾಜಾ ಭಜಂತ್ರಿ ವಿವಿಧ ವಾದ್ಯಮೇಳಗಳೊಂದಿಗೆ ಭವ್ಯವಾಗಿ ಮೆರವಣಿಗೆ ನಡೆಸಲಾಯಿತು.ಸಾವಿರಾರು ಭಕ್ತರು ದುರ್ಗಾದೇವಿಗೆ ಜಯಘೋಷ ಕೂಗುವ ಮೂಲಕ ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದರು. ರಥದ ಬೀದಿಯುದ್ದಕ್ಕೂ ಮಾಡಿರುವ ವಿದ್ಯುತ್ ದೀಪಾಲಂಕಾರ ಜಾತ್ರೆ ವೈಭವ ಮತ್ತಷ್ಟು ಹೆಚ್ಚಿಸಿತು.
ಹತ್ತಿ ಗಿಡಕ್ಕೆ ಬಾನದ ಬುತ್ತಿ ಕಟ್ಟಿನಿ, ಉಚ್ಚಿಕೊಂಡು ಉಂಡ್ರಲೋ ಮಕ್ಳ: ಕಾರ್ಣಿಕ ಹತ್ತಿ ಗಿಡಕ್ಕೆ ಬಾನದ ಬುತ್ತಿ ಕಟ್ಟಿನಿ, ಉಚ್ಚಿಕೊಂಡು ಉಂಡ್ರಲೋ ಮಕ್ಳ -ಇದು ಗುಮಗೇರಾ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರೆಯ ಕಾರ್ಣಿಕ. ಈ ನುಡಿಯು ಈ ಭಾಗದ ಕೃಷಿ ಹಾಗೂ ಜನಜೀವನದ ಕುರಿತು ಆಶಾದಾಯಕ ಸಂದೇಶ ನೀಡುತ್ತದೆ ಎಂದು ಹಿರಿಯರು ವಿಶ್ಲೇಷಿಸಿದರು. ಈ ಬಾರಿ ಹತ್ತಿ ಬೆಳೆಯು ಸಮೃದ್ಧವಾಗಿ ಬೆಳೆಯಲಿದ್ದು, ರೈತರ ಬದುಕು ಹಸನಾಗಲಿದೆ ಎಂಬ ನಂಬಿಕೆ ವ್ಯಕ್ತವಾಗಿದ್ದು, ಜನರಿಗೆ ಯಾವುದೇ ಕೊರತೆಯಿಲ್ಲದೆ ಸುಖ-ಸಮೃದ್ಧಿಯಿಂದ ಬದುಕುವ ಸಂಕೇತವೆಂದು ವಿಶ್ಲೇಷಿಸಲಾಗಿದೆ.