ಶಿಗ್ಗಾಂವಿ ತಾಲೂಕಿನ ಮುನವಳ್ಳಿ-ಬಂಕಾಪುರ ಪಟ್ಟಣದ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಡಿ. ೩೦ರಿಂದ ಜ. ೫ರ ವರೆಗೆ ನಡೆಯಲಿದ್ದು, ಪೂರ್ವಭಾವಿ ಸಭೆಯಲ್ಲಿ ಪ್ರತಿ ಕಾರ್ಯಗಳನ್ನು ಹಂಚಿಕೆ ಮಾಡಲಾಯಿತು.
ಶಿಗ್ಗಾಂವಿ: ತಾಲೂಕಿನ ಮುನವಳ್ಳಿ-ಬಂಕಾಪುರ ಪಟ್ಟಣದ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಡಿ. ೩೦ರಿಂದ ಜ. ೫ರ ವರೆಗೆ ನಡೆಯಲಿದ್ದು, ಪೂರ್ವಭಾವಿ ಸಭೆಯಲ್ಲಿ ಪ್ರತಿ ಕಾರ್ಯಗಳನ್ನು ಹಂಚಿಕೆ ಮಾಡಲಾಯಿತು. ವಿವಿಧ ಸಮಿತಿ ರಚಿಸಿ, ಕಮಿಟಿ ಸದಸ್ಯರು ಹಾಗೂ ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ತೋಪಿನ ದುರ್ಗಾದೇವಿ ದೇವಸ್ಥಾನದ ಸೇವಾ ಕಮಿಟಿ ಕಾರ್ಯದರ್ಶಿ ಬಸವರಾಜ ಕೂಲಿ ಮಾತನಾಡಿ, ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕದಲ್ಲಿ ಖ್ಯಾತಿ ಪಡೆದಿದೆ. ರಾಜ್ಯದ ವಿವಿಧ ಜಿಲ್ಲೆಯ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಕಾರ್ಯಕರ್ತರು ಈಗಿನಿಂದಲೇ ರೂಪುರೇಷೆಗಳನ್ನು ಹಾಕಿಕೊಂಡು ಶ್ರಮಿಸಬೇಕು. ಗಾಂಧೀಜಿಯವರ ತತ್ವ ಸಿದ್ಧಾಂತದಂತೆ ಯಾವುದೇ ಪ್ರಾಣಿ ಹಿಂಸೆಗೆ ಅವಕಾಶ ಕಲ್ಪಿಸಿಕೊಡದೇ, ಸಾತ್ವಿಕ ರೀತಿಯಿಂದ ಜಾತ್ರಾ ಮಹೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದರು.ಜಾತ್ರೆಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಬೇಕು. ದೂರದಿಂದ ಬರುವ ಭಕ್ತರಿಗೆ ಹಾಗೂ ಕುಸ್ತಿಪಟುಗಳಿಗೆ ಊಟ, ಉಪಾಹಾರದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಸೇವಾ ಕಾರ್ಯಕರ್ತರು ನಿಗಾ ವಹಿಸಬೇಕು. ವೇದಿಕೆ ಕಾರ್ಯಕ್ರಮ, ದೇವಿ ಮೂರ್ತಿ ಮೆರವಣಿಗೆ, ರಾಜ್ಯಮಟ್ಟದ ಕುಸ್ತಿ ಪಂದ್ಯ ಆಯೋಜಿಸಲಾಗಿದೆ ಎಂದು ಹೇಳಿದರು.
ಅರ್ಚಕರಾದ ಸುಮಂತ ಪೂಜಾರ, ಲಕ್ಷ್ಮಣ ಪೂಜಾರ, ತೋಪಿನ ದುರ್ಗಾದೇವಿ ದೇವಸ್ಥಾನದ ಸೇವಾ ಕಮಿಟಿ ಅಧ್ಯಕ್ಷ ಲಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹನುಮಂತಪ್ಪ ಹಳವಳ್ಳಿ, ಮುಖಂಡರಾದ ಪ್ರತಾಪಸಿಂಗ್ ಶಿವಪ್ಪನವರ, ಉಮೇಶ ಅಂಗಡಿ, ಸೋಮನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಗದಿಗಯ್ಯ ಹಿರೇಮಠ, ರಾಮಚಂದ್ರಪ್ಪ ಪುಕಾಳೆ, ಬಸವಣ್ಣೆಪ್ಪ ತೋಟದ, ಬಿಸನಳ್ಳಿ, ಮುನವಳ್ಳಿ, ಬಂಕಾಪುರ ಮತ್ತು ಸುತ್ತಲಿನ ಗ್ರಾಮದ ಮುಖಂಡರು, ದೇವಸ್ಥಾನ ಸೇವಾ ಸಮಿತಿ ಎಲ್ಲ ಸದಸ್ಯರು ಇದ್ದರು.