ಸಾರಾಂಶ
ರಾಮನಗರ: ಪ್ರತಿವರ್ಷದಂತೆ ಈ ವರ್ಷವೂ ಜಾನಪದ ಲೋಕದಲ್ಲಿ ನಾಡಿನ ಪ್ರಖ್ಯಾತ ದಸರಾ ಉತ್ಸವ ಆಚರಿಸಲಾಯಿತು.
ರಾಮನಗರ: ಪ್ರತಿವರ್ಷದಂತೆ ಈ ವರ್ಷವೂ ಜಾನಪದ ಲೋಕದಲ್ಲಿ ನಾಡಿನ ಪ್ರಖ್ಯಾತ ದಸರಾ ಉತ್ಸವ ಆಚರಿಸಲಾಯಿತು.
ನವರಾತ್ರಿ ಮೊದಲ ದಿನದಿಂದ ದಸರಾ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೆ ವಿಜಯದಶಮಿಯ ದಿನದಂದು ಬೆಳಿಗ್ಗೆ ಆಯುಧ ಪೂಜೆ ನೆರವೇರಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ- ಗಿರಿಜಮ್ಮ ದಂಪತಿಯ ಸಮ್ಮುಖದಲ್ಲಿ ಜಾನಪದ ಲೋಕದ ಮಹಾದ್ವಾರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ನಾಡೋಜ ಎಚ್.ಎಲ್.ನಾಗೇಗೌಡ ಕಲಾಶಾಲೆಯ ಮಕ್ಕಳಿಂದ ಪಟಕುಣಿತ, ಪೂಜಾಕುಣಿತ, ಬೀಸುಕಂಸಾಳೆ ನೃತ್ಯಗಳ ಪ್ರದರ್ಶನ ನಡೆಯಿತು. ಜನಪದ ಕಲಾವಿದರ ಛತ್ರಿ ಚಾಮರಗಳ ಮೆರವಣಿಗೆಯೊಂದಿಗೆ ದೇವರು ಬನ್ನಿಮಂಟಪಕ್ಕೆ ಆಗಮಿಸಿದರು.ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ಅಧ್ಯಕ್ಷರು ವಿಜಯದ ಸಂಕೇತವಾಗಿ ಬಿಲ್ಲು ಹೊಡೆದು ಬಾಳೆಮರವನ್ನು ಕತ್ತರಿಸಿದರು. ಬನ್ನಿಪತ್ರೆಯನ್ನು ಪರಸ್ವರರೊಂದಿಗೆ ಹಂಚಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ವಿಜಯದಶಮಿಯನ್ನು ಕಳೆದ ಸುಮಾರು 27 ವರ್ಷಗಳಿಂದ ವಿಜಯದ ಸಂಕೇತವಾಗಿ ಜಾನಪದ ಲೋಕದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬನ್ನಿಪತ್ರೆಯನ್ನು ಆರೋಗ್ಯದ ಸಂಕೇತವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಕೆ.ಸರಸವಾಣಿ, ಕ್ಯೂರೇಟರ್ ಡಾ.ಯು.ಎಂ.ರವಿ, ರಂಗಸಹಾಯಕ ಎಸ್. ಪ್ರದೀಪ್, ಸಂಶೋಧನ ಕೇಂದ್ರದ ಸಂಚಾಲಕ ಡಾ. ಸಂದೀಪ್ , ಜಾನಪದ ಲೋಕದ ಸಿಬ್ಬಂದಿ, ಜಾನಪದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.13ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಜಾನಪದ ಲೋಕದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ಪ್ರೊ.ಹಿ.ಚಿ.ಬೋರಲಿಂಗಯ್ಯ ವಿಜಯದ ಸಂಕೇತವಾಗಿ ಬಿಲ್ಲು ಹೊಡೆದರು.