ನರಸಿಂಹರಾಜಪುರಸೀತೂರಿನಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ನಾಡ ಹಬ್ಬದಂತೆ ಸಂಭ್ರಮದಿಂದ ನಡೆಯುತ್ತಿದೆ ಎಂದು ಸೀತೂರು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ರಮೇಶ್ ತಿಳಿಸಿದರು.
ಸೀತೂರಿನಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಉದ್ಘಾಟನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸೀತೂರಿನಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ನಾಡ ಹಬ್ಬದಂತೆ ಸಂಭ್ರಮದಿಂದ ನಡೆಯುತ್ತಿದೆ ಎಂದು ಸೀತೂರು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ರಮೇಶ್ ತಿಳಿಸಿದರು.
ಸೋಮವಾರ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಪಂ, ಸೀತೂರು ವಿನಾಯಕ ಯುವಕ ಸಂಘ ಹಾಗೂ ಕೆರೆಗದ್ದೆ, ಸೀತೂರು ಗ್ರಾಮಸ್ಥರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಾಲೀ ಬಾಲ್ ತರಬೇತಿದಾರರಾದ ಸಿ.ಎಸ್. ವಿನುತ ಮಾತನಾಡಿ ದಸರಾ ಕ್ರೀಡಾಕೂಟಕ್ಕೆ ನೂರಾರು ವರ್ಷದ ಇತಿಹಾಸವಿದೆ. ಪ್ರತಿ ವರ್ಷ ಮೈಸೂರಲ್ಲಿ ನಡೆಯುವ ದಸರ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು, ಜಿಲ್ಲಾ , ವಿಭಾಗೀಯ ಮಟ್ಟದ ಕ್ರೀಡಾ ಕೂಟ ನಡೆಯುತ್ತದೆ. ನಂತರ ರಾಜ್ಯಮಟ್ಟದ ದಸರಾ ಕ್ರೀಡಾ ಕೂಟ ನಡೆಯುತ್ತದೆ. ದಸರಾ ಕ್ರೀಡಾ ಕೂಟದಲ್ಲಿ 13 ವೈಯಕ್ತಿಕ ಹಾಗೂ ಇತರ ಗುಂಪು ಆಟಗಳು ನಡೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಿಟ್ಟೆ ಯೂನಿವರ್ಸಿಟಿ ಉಪನ್ಯಾಸಕ ಡಾ.ಸುದೀಪ್ ಹೆಗ್ಡೆ ಮಾತನಾಡಿ ದಸರಾ ಹಬ್ಬ ನಮ್ಮ ನಾಡಿನ ಪರಂಪರೆ, ಸಂಸ್ಕೃತಿಯನ್ನು ದೇಶ, ವಿದೇಶದಲ್ಲಿ ಪರಿಚಯಿಸುತ್ತದೆ. ರಾಜ್ಯದ ಮೂಲೆ, ಮೂಲೆಗಳಲ್ಲೂ ತಲಪಬೇಕು ಎಂಬ ಉದ್ದೇಶದಿಂದ ದಸರಾ ಕ್ರೀಡಾ ಕೂಟ ನಡೆಸಲಾಗುತ್ತದೆ ಎಂದರು.ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗ್ರಾಮಗಳಿಂದ 600 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದ್ದರು. ಪುರುಷರು,ಮಹಿಳೆಯರಿಗೆ ಅಥ್ಲೆಟಿಕ್ಸ್ ನಡೆಯಿತು. ಗುಂಪು ಸ್ಪರ್ಧೆಯಲ್ಲಿ ವಾಲೀ ಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್, ಷಟಲ್ ಬ್ಯಾಡ್ಮಟಿನ್, ಬಾಲ್ ಬ್ಯಾಡ್ಮಿಟನ್, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಮಾಜಿ ಮಂಡಲ ಪ್ರಧಾನ ಎಸ್.ಡಿ.ವಿ ಗೋಪಾಲರಾವ್ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಇ.ದಿವಾಕರ, ಯಕ್ಷಗಾನ ಕಲಾವಿದ ಅನಂತಪದ್ಮನಾಭ, ಸೀತೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಉಮೇಶ್, ಮಾಜಿ ಸದಸ್ಯ ಎಚ್.ಇ. ಮಹೇಶ್,ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ್, ರಾಘವೇಂದ್ರ, ಶಾಲಾ ಮುಖ್ಯೋಪಾಧ್ಯಾಯ ಬಸಪ್ಪ, ಸಹ ಶಿಕ್ಷಕ ಸುರೇಶ್, ಜೀವನ್ ಜ್ಯೋತಿ ಪ್ರೌಢ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್ ಇದ್ದರು.