ಸಾರಾಂಶ
ಲಕ್ಷ್ಮೇಶ್ವರ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸದೆ ಇರುವ ಹಿನ್ನೆಲೆಯಲ್ಲಿ ಕ್ರೀಡಾ ಆಯೋಜಕರನ್ನು ಶಾಸಕ ಡಾ. ಚಂದ್ರು ಲಮಾಣಿ ತರಾಟೆಗೆ ತೆಗೆದುಕೊಂಡು ಘಟನೆ ಶನಿವಾರ ನಡೆಯಿತು.
ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ತಾಪಂ ಸಹಯೋಗದಲ್ಲಿ ಪಟ್ಟಣದ ಉಮಾ ವಿದ್ಯಾಲಯ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ಲಕ್ಷ್ಮೇಶ್ವರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಹಾಗೂ ಕ್ರೀಡಾ ಧ್ವಜಾರೋಹಣ ನೆರವೇರಿಸಿ ವಾಲಿಬಾಲ್ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿರು.ದಸರಾ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕ್ರೀಡಾಪಟುಗಳು ಭಾಗವಹಿಸಬೇಕಾಗಿತ್ತು. ಆದರೆ ತಾಲೂಕಿನ ಕ್ರೀಡಾ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪ್ರಚಾರ ಮತ್ತು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಆಗಮಿಸಿದ್ದಾರೆ. ಇದು ತಾಲೂಕು ಮಟ್ಟದ ಕ್ರೀಡಾಕೂಟ ಹೀಗೆ ಬೇಕಾಬಿಟ್ಟಿ ಕ್ರೀಡಾಕೂಟ ಆಯೋಜಿಸಿದ್ದು ಸರಿಯಲ್ಲ ಎಂದು ಹೇಳಿದ ಶಾಸಕರು ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಯುವಕರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸದೃಢ ಅರೋಗ್ಯ ಹೊಂದಲು ಸಾಧ್ಯ, ಯುವಕರು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೈಹಿಕ ಅರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದರು.ಖೋಖೋ ಪಂದ್ಯಾವಳಿ ವೇಳೆ ಯುವಕರ ಮಾರಾಮಾರಿ: ಪಟ್ಟಣದ ಉಮಾ ವಿದ್ಯಾಲಯದಲ್ಲಿ ಶನಿವಾರ ಮಧ್ಯಾಹ್ನ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲೆಹೊಸೂರ ಹಾಗೂ ಬಟ್ಟೂರ ಗ್ರಾಮದ ಯುವಕರು ಖೋ ಖೋ ಪಂದ್ಯಾವಳಿ ವೇಳೆ ಪರಸ್ಪರ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ ಕ್ರೀಡಾಕೂಟ ಮುಂದೂಡಲಾಗಿದೆ.
ಬಾಲೆಹೊಸೂರ ಹಾಗೂ ಬಟ್ಟೂರ ಗ್ರಾಮದ ಯುವಕರ ನಡುವೆ ಖೋ ಖೋ ಪಂದ್ಯಾವಳಿ ನಡೆಯುತ್ತಿತ್ತು. ಒಬ್ಬ ಕ್ರೀಡಾಪಟು ಆಟದಲ್ಲಿ ಎದುರಾಳಿ ತಂಡದ ಸದಸ್ಯನ ಸ್ಪರ್ಶಿಸುವ ಭರದಲ್ಲಿ ಸ್ವಲ್ಪ ಜೋರಾಗಿ ಕೈ ತಾಕಿದೆ. ಬೇಕೆಂದೇ ಹೀಗೆ ಮಾಡಿದ್ದಾನೆ ಎಂದು ತಿಳಿದು ಇನ್ನೊಂದು ತಂಡದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡೂ ತಂಡದವರು ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದಾಡಿಕೊಂಡಿದ್ದಾರೆ. ಕ್ರೀಡಾಕೂಟಕ್ಕೆ ತಂದಿದ್ದ ಕುರ್ಚಿಗಳಲ್ಲೂ ಹೊಡೆದು ಮುರಿದು ಹಾಕಿದ್ದಾರೆ. ಈ ವೇಳೆ ಕ್ರೀಡಾಂಗಣದಲ್ಲಿದ್ದ ಕಿರಿಯರು ಭಯದಿಂದ ಚೆಲ್ಲಾಪಿಲ್ಲಿಯಾದರು.ಘಟನೆ ತಿಳಿದ ತಾಪಂ ಇಒ ಕೃಷ್ಣಪ್ಪ ಧರ್ಮರ ಅವರು ಪೊಲೀಸರನ್ನು ಕರೆದುಕೊಂಡು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಪೊಲೀಸರು ಯುವಕರನ್ನು ಬೆನ್ನಟ್ಟಿ ಹೊಡೆದು ಓಡಿಸಿದರು. ಈ ವೇಳೆ ಕೃಷ್ಣಪ್ಪ ಧರ್ಮ ಅವರು ಕ್ರೀಡಾಕೂಟ ಮುಂದೂಡಲಾಗಿದೆ ಎಂದು ಘೋಷಿಸಿದರು. ನಂತರ ಯುವಕರು ತಮ್ಮ ಊರಿನತ್ತ ಹೆಜ್ಜೆ ಹಾಕಿದರು.ಅವ್ಯವಸ್ಥೆಯ ಆಗರವಾದ ದಸರಾ ಕ್ರೀಡಾಕೂಟ:ಲಕ್ಷ್ಮೇಶ್ವರ ತಾಲೂಕಿನ ಕ್ರೀಡಾಕೂಟ ಹಲವು ಅವ್ಯವಸ್ಥೆಗಳ ಆಗರವಾಗಿತ್ತು. ನೀರಿನ ವ್ಯವಸ್ಥೆ ಇರಲಿಲ್ಲ. ಪೊಲೀಸ್ ಭದ್ರತೆಯೂ ಇರಲಿಲ್ಲ. ಕ್ರೀಡಾಕೂಟದಲ್ಲಿ ಕ್ರೀಡಾಪಟು ಗಾಯಗೊಂಡರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ವೈದ್ಯಕೀಯ ವ್ಯವಸ್ಥೆ ಇರಲಿಲ್ಲ. ಏನಾದರೂ ಅನಾಹುತವಾದರೆ ಹೊಣೆ ಯಾರು ಎಂದು ಬಾಲೆಹೊಸೂರಿನ ಮಲ್ಲಿಕಾರ್ಜುನ ದೊಡ್ಡಮನಿ ಪ್ರಶ್ನಿಸಿದರು.