ಕನ್ನಡಪ್ರಭ ವಾರ್ತೆ ಬೀಳಗಿ

ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಾಗಬೇಕು. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಚುನಾವಣೆಗಳಲ್ಲಿ ಎದುರಾಳಿ ಪಕ್ಷದವರನ್ನು ಧೂಳಿಪಟ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳಗಿ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಂಘಟನಾತ್ಮಕ ಸಭೆ ಮತ್ತು ಬಿಎಲ್‌ಎ-2ಗಳ ಕಾರ್ಯಾಗಾರ ಹಾಗೂ ವಿಬಿ-ಜಿ ರಾಮ್-ಜಿ ಜನಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ ನಂತರ ಕಾಂಗ್ರೆಸೇತರ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದನ್ನು ಸಹಿಸಿಕೊಳ್ಳಲಾರದ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಮೇಲೆ ಬಡವರು ಬದುಕಬೇಕೆನ್ನುವ ಕಾಂಗ್ರೆಸ್ ಪಕ್ಷದ ನೀತಿ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಹೊಸ ಶಿಕ್ಷಣ ನೀತಿ, ಕಿಸಾನ್ ಸಮ್ಮಾನ್‌ ಯೋಜನೆ, ಒಂದು ದೇಶ ಒಂದು ಚುನಾವಣೆ, ವಕ್ಫ್‌ ಕಾಯ್ದೆ, ಜನೌಷಧಿಯಂತಹ ಹಲವಾರು ಜನಪ್ರಿಯ ಯೋಜನೆಗಳನ್ನು ನೀಡಿದ ಕೇಂದ್ರ ಸರ್ಕಾರದ ಯಾವ ಯೋಜನೆಯನ್ನು ಕಾಂಗ್ರೆಸ್ ಪಕ್ಷದವರು ಒಪ್ಪಿಕೊಂಡಿದ್ದಾರೆ. ಎಲ್ಲವನ್ನು ವಿರೋಧಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ವಿಬಿ-ಜಿ ರಾಮ್-ಜಿ ಯೋಜನೆಯ ಪ್ರಕಾರ ಗ್ರಾಮ ಸಭೆಗಳಲ್ಲಿ ಏನು ತೀರ್ಮಾನವಾಗುತ್ತದೆಯೋ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಜನರಿಗೆ ತಪ್ಪು ಕಲ್ಪನೆ ನೀಡುವ ಮೂಲಕ ಯೋಜನೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, 2 ವರ್ಷದಿಂದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿಫಲತೆಗಳನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದರು.ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಮನರೇಗಾ ಹೆಸರು ಬದಲಾವಣೆಯಾಗಿರುವುದು ಇದೆ ಮೊದಲಲ್ಲ, ಬಿಜೆಪಿಯಿಂದ ನರೇಗಾ ಯೋಜನೆ ಬಲಪಡಿಸುವ ಕಾರ್ಯ ನಡೆದಿದೆ ಹೊರತು ರದ್ದುಗೊಳಿಸುವುದಲ್ಲ. ರಾಜ್ಯ ಸರ್ಕಾರ ಸಲಾಯನ ಮೇಲೆ ನಿಂತಿದೆ ಎಂದು ಲೇವಡಿ ಮಾಡಿದರು.ಭಾಜಪ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮನೆ ಮನೆಗೆ ಮದ್ಯ ಕೊಡುವ 6ನೇ ಗ್ಯಾರಂಟಿ ನೀಡಿದರು ಆಶ್ಚರ್ಯ ಪಡಬೇಕಾಗಿಲ್ಲ. ಬಾಗಲಕೋಟೆ ಉಪಚುನಾವಣೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆಗಳು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗುತ್ತವೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಖೋತ, ಬಿಜೆಪಿ ತಾಲೂಕ ಮಂಡಲದ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ, ಮಲ್ಲಿಕಾರ್ಜುನ ಅಂಗಡಿ, ಮಲ್ಲಪ್ಪ ಶಂಭೂಜಿ, ವೀರಣ್ಣ ತೋಟದ, ವಿಠ್ಠಲ ಯತ್ನಟ್ಟಿ, ನಿಂಗಪ್ಪ ಧಂದರಗಿ ಇದ್ದರು.ಬಿಜೆಪಿ ಬಿಟ್ಟು ಹೋದವರನ್ನು ವಾಪಸ್‌ ಕರೆತರುತ್ತೇವೆ: ನಿರಾಣಿ


ಕನ್ನಡಪ್ರಭ ವಾರ್ತೆ ಬೀಳಗಿ

ಬಿಜೆಪಿ ಬಿಟ್ಟು ಹೋದವರನ್ನು ವಾಪಸ್‌ ಕರೆದುಕೊಂಡು ಬರುತ್ತೇವೆ ಎಂದು ಬಿಜೆಪಿ ರಾಜ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಪಟ್ಟಣದಲ್ಲಿ ನಡೆದ ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಂಡಿತವಾಗಿಯೂ ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬರುತ್ತೇವೆ. ಇಡೀ ರಾಜ್ಯಾದ್ಯಂತ ಅನ್ ಕಂಡೀಷನಲ್ (ಷರತ್ತುರಹಿತವಾಗಿ) ಆಗಿ, ಯಾರ್‍ಯಾರು ಪಕ್ಷಕ್ಕೆ ವಾಪಸ್‌ ಬರಲು ಬಯಸುತ್ತಾರೋ ಅವರೆಲ್ಲರನ್ನು ಕೂಡ ಕರೆದುಕೊಂಡು ಬರುವುದಕ್ಕೆ‌ನಾವು ನಾವು ಸಿದ್ಧರಿದ್ದೇವೆ. ಈಗಾಗಲೇ ಈ ಬಗ್ಗೆ ಚರ್ಚೆಯಾಗಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನೂ ವಾಪಸ್ ಕರೆತರುತ್ತೀರಾ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ್‌ ಅವರು ಶಾಸಕರಾಗಿರುವುದರಿಂದ ಅದು ನಮ್ಮ ‌ಕೈಯಲ್ಲಿ ಇಲ್ಲ. ಎಂಎಲ್ಎ, ಎಂಪಿ ಇರುವವರ ಬಗ್ಗೆ ನಿರ್ಧಾರ ಮಾಡುವಂಥದ್ದು ನಮ್ಮ ರಾಜ್ಯದಲ್ಲಿ ಇರುವುದಿಲ್ಲ. ಅದನ್ನು ರಾಷ್ಟ್ರೀಯ ನಾಯಕರು ನಿರ್ಧಾರ ಮಾಡಲಿದ್ದಾರೆ. ಇದರಿಂದಾಗಿ ಅವರು ಏನು ನಿರ್ಧಾರ ಮಾಡುತ್ತಾರೋ ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು.

ನಾವು ಎಷ್ಟು ದಿನ ರಾಜಕಾರಣ ಮಾಡುವವರಿದ್ದೇವೆ? ಇದ್ದಷ್ಟು ದಿನ ಎಲ್ಲರೂ ಕೂಡ ಒಂದಾಗಿ ಒಗ್ಗಟ್ಟಾಗಿ ಹೋಗುವುದರಿಂದ ಅವರ ಮನಸ್ಸಿಗೆ ಸಮಾಧಾನ ಇರುತ್ತದೆ. ನಮಗೂ ಸಮಾಧಾನ ಇರುತ್ತದೆ ಎಂದು ತಿಳಿಸಿದರು.

2028ಕ್ಕೆ ವಿಜಯೇಂದ್ರ ಮುಖ್ಯಮಂತ್ರಿ ಆಗುವುದು ಸತ್ಯ

ಕನ್ನಡಪ್ರಭ ವಾರ್ತೆ

ಬೀಳಗಿಸೂರ್ಯ ಚಂದ್ರ ಉದಯಿಸುವುದು ಎಷ್ಟು ಸತ್ಯವೋ ವಿಜಯೇಂದ್ರ ಮುಖ್ಯಮಂತ್ರಿ ಆಗೋದು ಅಷ್ಟೇ ಸತ್ಯ. 2028ಕ್ಕೆ ವಿಜಯೇಂದ್ರ ಮುಖ್ಯಮಂತ್ರಿ ಆಗುವುದು ಸತ್ಯ ಎಂದು ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ನಡೆದ ವಿಬಿ ಜಿ ರಾಮ್ ಜಿ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ನಮ್ಮ ಜೊತೆ ಎಲ್ಲ ವಿಷಯವನ್ನು ಹಂಚಿಕೊಳ್ಳುತ್ತಾರೆ. ಅಧ್ಯಕ್ಷರ ಜೊತೆ ನಾನು ಎರಡು ದಿನಗಳಿಂದ ಅವರ ಜೊತೆಯಲ್ಲೇ ಇದ್ದೇನೆ. ಎಲ್ಲಿಯೇ ಹೋದರೂ ನಮ್ಮ ಯಡಿಯೂರಪ್ಪನವರ ಮಗ ಅಂತ ಹೇಳುತ್ತಾರೆ ಎಂದರು.ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, 2028ಕ್ಕೆ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗೋದು ಅಷ್ಟೇ ಸತ್ಯ. ರಾಜ್ಯದಲ್ಲಿ ಎಲ್ಲಿಯೇ ಹೋದರೂ ಜನರು ನಮ್ಮ ಯಡಿಯೂರಪ್ಪನವರು, ನಮ್ಮ ಯಡಿಯೂರಪ್ಪನವರ ಮಗ ವಿಜಯೇಂದ್ರ ನಮ್ಮ ಅಧ್ಯಕ್ಷರು ಅಂತಾರೆ. ನಮ್ಮ ಯಡಿಯೂರಪ್ಪನವರು ಇಲ್ಲಿಗೆ ಬಂದು ಹೋದ ಮೇಲೆ ಮುಖ್ಯಮಂತ್ರಿ ಆಗಿದ್ದರು. ಈಗ ನೀವು (ವಿಜಯೇಂದ್ರ) ಬಂದಿದ್ದೀರಿ, ನೀವು ಮುಖ್ಯಮಂತ್ರಿ ಆಗುತ್ತಿರಿ ಅಂತಾ ಪ್ರತೀ ಗ್ರಾಮದಲ್ಲಿ ಹೇಳುತ್ತಿದ್ದಾರೆ ಎಂದರು.ಅಬಕಾರಿ ಇಲಾಖೆಗೆ ₹40 ಕೋಟಿ ಟಾರ್ಗೆಟ್ ನೀಡಿರುವ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ದಿನಸಿ ಅಂಗಡಿಗಳಲ್ಲಿಯೂ ಮದ್ಯ ಸಿಗುವ ಏಕೈಕ ರಾಜ್ಯ ಕರ್ನಾಟಕ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು.