ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವತಿಯಿಂದ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಮಾ.4ರಿಂದ 30ರವರೆಗೆ ಕಿವಿಯ ಸಂಪೂರ್ಣ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕಿವಿ ಮೂಗು ಮತ್ತು ಗಂಟಲು ವಿಭಾಗದ ತಜ್ಞ ವೈದ್ಯೆ ಡಾ. ಟಿ.ಎಂ. ಸ್ಮಿತಾ ಹೇಳಿದರು.
430 ಮಿಲಿಯನ್ ಜನರಲ್ಲಿ ದೋಷ:ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ವರ್ಷ ಮಾ.3ರಂದು ವಿಶ್ವಾದ್ಯಂತ ಶ್ರವಣ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಉದ್ದೇಶ ಸಾರ್ವಜನಿಕರಲ್ಲಿ ಕಿವಿಯ ಬಗ್ಗೆ ಅರಿವು ಮೂಡಿಸುವುದಾಗಿದೆ. ವಿಶ್ವಾದ್ಯಂತ ಶೇ.80ರಷ್ಟು ಕಿವಿ ತೊಂದರೆ ಇರುವವರು ಚಿಕಿತ್ಸೆ ಪಡೆಯುತ್ತಿಲ್ಲ. ಕಾರಣ ಹಿಂಜರಿಕೆ ಮತ್ತು ತಜ್ಞವೈದ್ಯರ ಕೊರತೆ. 1.5 ಬಿಲಿಯನ್ ಜನರು ಶ್ರವಣ ದೋಷವನ್ನು ಹೊಂದಿದ್ದಾರೆ. 430 ಮಿಲಿಯನ್ ಜನರು ಸಂಪೂರ್ಣ ಶ್ರವಣದೋಷದ ತೊಂದರೆಯಿಂದ ಬಳಲುತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅತಿಯಾದ ಶಬ್ಧ ಮಾಲಿನ್ಯದಿಂದ ಶ್ರವಣ ದೋಷದ ತೊಂದರೆಗಳು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಶೇ.60 ಮಕ್ಕಳಲ್ಲಿ ಉಂಟಾಗುವ ಕಿವಿ ಕೇಳಿಸದೇ ಇರುವ ತೊಂದರೆಗಳನ್ನು ಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ. ಶ್ರವಣ ದೋಷಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯದಿದ್ದರೆ ಮಕ್ಕಳು ಮಾತನಾಡಲು ಅಸಮರ್ಥರಾಗುವುದು, ವಿದ್ಯಾರ್ಥಿಗಳಿಗೆ ಕಿವಿ ಕೇಳಿಸದೇ ಸೂಕ್ತವಾಗಿ ವಿದ್ಯಾಭ್ಯಾಸ ಮಾಡಲು ತೊಂದರೆ ಆಗುವುದು ಮತ್ತು ವಯಸ್ಸಾದಂತೆ ಶ್ರವಣದೋಷದ ಪ್ರಮಾಣವು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಎಚ್ಚರಿಸಿದರು.ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಮಾ.30ರವರೆಗೆ ನಡೆಯುವ ಕಿವಿಯ ಸಂಪೂರ್ಣ ತಪಾಸಣಾ ಶಿಬಿರದಲ್ಲಿ ಕಿವಿ ಸೋರಿವಿಕೆ, ಕಿವಿಯಲ್ಲಿ ನೋವು, ಕಿವಿಯಲ್ಲಿ ಶಬ್ಧ, ಕಡಿಮೆ ಕೇಳುವುದು, ತಲೆ ತಿರುಗುವುದು ಇತ್ಯಾದಿ ಕಿವಿ ಸಂಬಂಧಿತ ಸಮಸ್ಯೆಗಳಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವೈದ್ಯರ ಸಲಹೆಯ ಮೇರೆಗೆ ಆಡಿಯೋಮೆಟ್ರಿ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಚಕ್ರವರ್ತಿ, ಸಾರಂಗ್, ವರ್ಗೀಸ್ ಪಿ ಜಾನ್, ಎಸ್.ವಿ. ರಾಜಾಸಿಂಗ್ ಇದ್ದರು.- - -
ಬಾಕ್ಸ್ 700ಕ್ಕೂ ಅಧಿಕ ಯಶಸ್ವಿ ಶಸ್ತ್ರಚಿಕಿತ್ಸೆ:ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಆಧುನಿಕ ಯಂತ್ರೋಪಕರಣಗಳೊಂದಿಗೆ ನುರಿತ ಅನುಭವಿ ತಜ್ಞರ ತಂಡದೊಂದಿಗೆ ಅತೀ ಸೂಕ್ಷ್ಮ 700ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಮೈಕ್ರೋ ಹಿಯರ್ ಸರ್ಜರಿ, ಹಿಯರಿಂಗ್ ಇವ್ಯಾಲುವೇಷನ್, ಸ್ಪೀಚ್ ಥೆರಪಿ, ಗ್ರೊಮೆಟ್ ಅಳವಡಿಕೆ, ಹಿಯರಿಂಗ್ ಏಡ್ ಫೆಸಿಲಿಟಿ ಮತ್ತು ಇವ್ಯಾಲುವೇಷನ್ ಆಫ್ ವರ್ಟಿಗೊ ಅಂಡ್ ಟ್ರಿಟ್ಮೆಂಟ್ ಮುಂತಾದ ಸೇವೆಗಳು ಲಭ್ಯವಿದೆ ಎಂದು ತಿಳಿಸಿದರು.
- - - -5ಎಸ್ಎಂಜಿಕೆಪಿ01:ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿವಿ ಮೂಗು ಮತ್ತು ಗಂಟಲು ವಿಭಾಗದ ತಜ್ಞ ವೈದ್ಯೆ ಡಾ. ಟಿ.ಎಂ.ಸ್ಮಿತಾ ಮಾತನಾಡಿದರು.