ಸಾರಾಂಶ
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಈಗಿನ ಹೆತ್ತವರು, ಶಿಕ್ಷಕರು ಅಥವಾ ನಾಗರಿಕರು ತಮ್ಮ ಬಾಲ್ಯದಲ್ಲಿ ಕಲಿಕೆಗೋಸ್ಕರ ಮಾಡಿದ ಕೀಟಲೆಗಳಿಗೆ ಹೆತ್ತವರಿಂದ, ಶಿಕ್ಷಕರಿಂದ ಶಿಕ್ಷೆ ಪಡದೇ ಬೆಳೆದವರು. ಅಂದಿನ ಸಾಮಾಜಿಕ ಪದ್ಧತಿ ಹಾಗೆ ಇತ್ತು. ಇದು ಹೊಸ ಶತಮಾನ ಈಗಿನ ಮಕ್ಕಳು ಹುಟ್ಟು ಚುರುಕು ಸ್ವಭಾವದವರು, ಪ್ರತಿಭಾವಂತರು ಮತ್ತು ಸೂಕ್ಷ್ಮ ಮನಸ್ಸಿನವರು. ಇಂದು ಶಿಕ್ಷೆ ನೀಡಿ ಶಿಕ್ಷಣ ನೀಡಲಾಗದು. ಅದು ಅವರ ಸುಪ್ತ ಮನಸ್ಸಿನ ಮೇಲೆ ಆಗಾಧ ಪರಿಣಮ ಬೀರುತ್ತದೆ ಎಂದು ಖ್ಯಾತ ಮನೋಜ್ಞಾನಿ ಡಾ.ಪಿ ವಿ ಭಂಡಾರಿ ಹೇಳಿದ್ದಾರೆ.
ಸಂತೆಕಟ್ಟೆ ಮೌಂಟ್ರೋಸರಿ ಆಂಗ್ಲ ಶಾಲೆಯ ಪ್ರೌಢ ಶಾಲಾ ಹಂತದ ಶಿಕ್ಷಕ-ರಕ್ಷಕ ಸಭೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ವಂ.ಡಾ.ರಾಕ್ ಡಿʼಸೋಜ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಮಾಧ್ಯಮ ಮತ್ತು ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳಿಗೆ ಆಕರ್ಷಿತರಾಗುವುದು ಖೇದಕರ. ಮಕ್ಕಳ ಮೇಲೆ ನಿಗಾವಿರಬೇಕು ಎಂದು ಹೆತ್ತವರಿಗೆ ಕರೆ ನೀಡಿದರು.
ಕಳೆದ ಸಾಲಿನ ಶಿಕ್ಷಕ-ರಕ್ಷಕ ಸಭೆಯ ಅಧ್ಯಕ್ಷ ನಾಗರಾಜ್ ಮತ್ತು ವಿಶೇಷ ಉಪನ್ಯಾಸ ನೀಡಿದ ಡಾ. ಭಂಡಾರಿ ಅವರನ್ನು ಸನ್ಮಾನಿಸಲಾಯಿತು.ಸಂಘದ ಕಾರ್ಯದರ್ಶಿ ಶಿಕ್ಷಕಿ ವನಿತಾ ಫರ್ನಾಂಡಿಸ್ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಶಿಕ್ಷಕಿ ಸಿ. ಆನ್ಸಿಲ್ಲಾ ಶಾಲೆಯಲ್ಲಿ ಮಾರ್ಪಾಡುಗಳ ಸ್ಥೂಲ ಪರಿಚಯ ನೀಡಿದರು. ವಿದ್ಯಾರ್ಥಿಗಳು ತಮ್ಮ ಕಾರ್ಯ ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ವಿಶೇಷ ರೀತಿಯಲ್ಲಿ ಮಂಡಿಸಿದರು. ಶಿಕ್ಷಕಿ ಮಮತಾ ಸ್ವಾಗತಿಸಿದರು. ಸತ್ಯವತಿ ವಂದಿಸಿದರು. ದಿವ್ಯಾಜ್ಯೋತಿ ನಿರೂಪಿಸಿದರು.