ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಪರೀಕ್ಷೆಗೆ ಪೂರಕ ಕಲಿಕಾ ಕೇಂದ್ರವನ್ನು ರೋಶನಿ ಸಮಾಜಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ ಉದ್ಘಾಟಿಸಿದರು. 6 ಹಳ್ಳಿಗಳಲ್ಲಿ ಇಂತಹ ಕೇಂದ್ರ ತೆರೆಯಲಾಗಿದೆ ಎಂದರು.

ಹಾನಗಲ್ಲ: ಕಲಿಕೆಯಲ್ಲಿ ಹಿಂದುಳಿದ ಬಡ ಮಕ್ಕಳಿಗೆ ಕಲಿಕೆಗೆ ಪೂರಕವಾಗುವಂತೆ ಗ್ರಾಮಗಳಲ್ಲಿ ಕಲಿಕಾ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಕಾಳಜಿಯಿಂದ ಶಿಕ್ಷಣ ನೀಡುವ ಯೋಜನೆಯನ್ನು ರೋಶನಿ ಸಮಾಜಸೇವಾ ಸಂಸ್ಥೆ ಆರಂಭಿಸಿದ್ದು, ಈಗ 6 ಹಳ್ಳಿಗಳಲ್ಲಿ ಯೋಜನೆ ಜಾರಿಯಲ್ಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಹೇಳಿದರು.

ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಪರೀಕ್ಷೆಗೆ ಪೂರಕ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಬಡತನಕ್ಕಾಗಿ ಊರೂರು ಅಲೆದು ದುಡಿಯಲು ಮುಂದಾಗುವ ಹಲವು ಪಾಲಕರಿಗೆ ಮಕ್ಕಳ ಕಡೆಗೆ ಗಮನ ಕೊಡಲು ಆಗುತ್ತಿಲ್ಲ. ಆದರೆ ಸಮಾಜ ಇಂತಹ ಮಕ್ಕಳ ಹಿತಕ್ಕೆ ಕೈ ಜೋಡಿಸಬೇಕು. ನಮ್ಮ ರೋಶನಿ ಮಾದರಿಯಾಗಿ ಇಂತಹ ಕಲಿಕ ಕೇಂದ್ರಗಳನ್ನು ಆರಂಭಿಸುತ್ತಿದೆ. ಇದು ಎಲ್ಲ ಹಳ್ಳಿಗಳಲ್ಲಿ ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ನಡೆಯುವಂತಾದರೆ ಪ್ರತಿಭಾವಂತ ಮಕ್ಕಳಿಗೆ ಪುಷ್ಟಿ ನೀಡಿದಂತಾಗುತ್ತದೆ. ಇದರಲ್ಲಿ ಸಾರ್ಥಕತೆಯ ಸಂತೃಪ್ತಿಯೂ ಇದೆ. ಪ್ರತಿ ನಿತ್ಯ ಸಂಜೆ ಆಯಾ ಗ್ರಾಮಗಳ ವಿದ್ಯಾವಂತರು ಬಡ ಮಕ್ಕಳ ಕಲಿಕೆಗಾಗಿ 2 ಗಂಟೆ ಸಮಯ ನೀಡಿದರೆ ಇದು ಅತ್ಯುತ್ತಮ ಪರಿಣಾಮ ನೀಡಬಲ್ಲದು ಎಂದರು.

ಮುಖ್ಯೋಪಾಧ್ಯಾಯ ಎಂ.ಎಸ್. ಬಡಿಗೇರ ಮಾತನಾಡಿ, ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ನೀಡಿ ಕಲಿಕೆ ಸುಧಾರಿಸಲಾಗುತ್ತಿದೆ. ಇದಕ್ಕೆ ಪಾಲಕ ಸಹಕಾರವೂ ಬೇಕು. ಶಾಲೆಗಳು ಮಕ್ಕಳಿಗೆ ಉತ್ತಮ ವಾತಾವರಣ ನೀಡಿ ಕಲಿಕೆ ಉನ್ನತಗೊಳಿಸುತ್ತಿವೆ. ಮನೆಯಲ್ಲಿಯೂ ಉತ್ತಮ ಕಲಿಕಾ ವಾತಾವರಣ ಮಕ್ಕಳಿಗೆ ನೀಡಬೇಕು ಎಂದರು.

ಪಿಡಿಒ ರೇಣುಕಾದೇವಗಿರಿ ಮಾತನಾಡಿ, ನಾವು ಎಲ್ಲರೂ ಜ್ಞಾನ ಎಂಬ ಭಂಡಾರವನ್ನು ತಿಳಿದುಕೊಂಡರೆ ಅನೇಕ ಕಾನೂನುಗಳನ್ನು ತಿಳಿದುಕೊಂಡು ಅನೇಕರ ಬದುಕಿಗೆ ನಾವು ದಾರಿದೀಪವಾಗಬಹುದು. ಗ್ರಾಮ ಪಂಚಾಯಿತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಲೂ ನಾವು ಸಿದ್ಧರಿದ್ದೇವೆ ಎಂದರು

ಜನವೇದಿಕೆ ನಾಯಕರಾದ ಫಕ್ಕೀರಪ್ಪ ಬಾಳೂರ, ಮಂಗಳಾ ಬೆಣ್ಣೆ, ಗಾಯಿತ್ರಿ ಚೋಟಣ್ಣನವರ, ದೀಪ ಈಳಿಗೇರ, ಹಿರಿಯಾರದ ಲಕ್ಷ್ಮಣ ವಾಲಿಕಾರ, ಜಗದಿಶ ಭಜಂತ್ರಿ, ಸಂಗಪ್ಪ ಗುಂಡೂರು, ಬಸವರಾಜ ಕರಿಬೀಮಣ್ಣನವರ, ರೋಶನಿ ಸಂಸ್ಥೆಯ ಸಂಯೋಜಕರಾದ ನಿರ್ಮಲಾ ಮಡಿವಾಳರ, ಎಸ್.ವಿ. ಪಾಟೀಲ, ಪೂಣಿಮಾ ತೋಟಣ್ಣನವರ, ಡಿಗ್ಗಪ್ಪ ಲಮಾಣಿ, ಪ್ರಕಾಶ ಆಡೂರ ಇದ್ದರು.