ಕನ್ನಡಪ್ರಭ ವಾರ್ತೆ ಮುಧೋಳ

ಶಿಕ್ಷಣ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗ. ಅದು ಜಗತ್ತಿನ ಎಲ್ಲ ಬೇಕು-ಬೇಡಿಕೆಗಳನ್ನು ದಕ್ಕಿಸಿಕೊಳ್ಳಲು ನಮ್ಮ ಬಳಿ ಇರುವ ಸಮರ್ಥ ಆಯುಧವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ (ಎಸ್ಪಿ) ಸಿದ್ಧಾರ್ಥ ಗೋಯಲ್ ಹೇಳಿದರು.

ಸೋಮವಾರ ನಗರದ ವಿಜಯ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿ ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ಹಮ್ಮಿಕೊಂಡ ಎಂ.ಆರ್.ಎನ್ ಜ್ಞಾನ ಸಂಜೀವಿನಿ ಯೋಜನೆಯಡಿ 2ನೇ ವರ್ಷದ ಶೈಕ್ಷಣಿಕ ದತ್ತು ಯೋಜನೆಗೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಿ ಮಾತನಾಡಿದ ಅವರು, ಪ್ರತಿ ಮಗು ಈ ರಾಷ್ಟ್ರದ ಆಸ್ತಿಯಾಗಿದೆ. ಮಗುವನ್ನು ತಂದೆ-ತಾಯಿ ಶ್ರದ್ಧೆಯಿಂದ ಬೆಳೆಸಿದಂತೆ, ಸಮಾಜ ತನ್ನ ಸಾಮಾಜಿಕ ಜವಾಬ್ದಾರಿ ಅರಿತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತದೆ. ಅಂತಹ ಅಪೂರ್ವ ಕಾರ್ಯದಲ್ಲಿ ಭಾಗಿಯಾದ ಎಂ.ಆರ್.ಎನ್ ಫೌಂಡೇಶನ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಡಿಡಿಪಿಐ ಅಜಿತ ಮನ್ನಿಕೇರಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು. ಪ್ರತಿ ವಿದ್ಯಾರ್ಥಿಯಲ್ಲೂ ಅಗೋಚರ ಪ್ರತಿಭೆ ಇದೆ. ಅದನ್ನು ಹೊರತೆಗೆದಾಗ ಮಗುವಿನ ಶೈಕ್ಷಣಿಕ ವಿಕಾಸ ಸಾಧ್ಯವಾಗಲಿದೆ. ಮನಸ್ಸಿದ್ದಲ್ಲಿ ಮಾರ್ಗವಿದೆ. ಇದನ್ನು ಅರಿತು ಮಕ್ಕಳು ಸಾಧನೆಗೆ ಸಜ್ಜಾಗಬೇಕು. ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ನಿರಾಣಿ ಸಹೋದರರ ಕಾಳಜಿ ಅಪೂರ್ವವಾದದ್ದು. ಈ ಯೋಜನೆ ಪ್ರತಿಫಲ ಭವಿಷ್ಯದಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳಿಗೆ ಲಭಿಸಲಿ ಎಂದು ಆಶಿಸಿದರು.

ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಬೆಳೆಯಬೇಕು. ಅವರು ಐಎಎಸ್ ಮಾಡಬೇಕು, ಉದ್ಯಮಿಯಾಗಬೇಕು. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು. ಇದು ಸಹೋದರ ಮುರುಗೇಶ ನಿರಾಣಿಯವರ ಹಂಬಲವಾಗಿದೆ. ಇದರ ಪ್ರತಿಫಲವಾಗಿ ಈ ಯೋಜನೆ ರೂಪುಗೊಂಡಿದೆ. ವರ್ಷ ಈ ಯೋಜನೆಯಡಿ 150 ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆಯಲಾಗಿತ್ತು. ಈ ವರ್ಷ ಹೊಸ 150 ಜನ ಸೇರಿಕೊಂಡಿದ್ದಾರೆ. 2030ರ ವೇಳೆಗೆ 5 ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆ ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.


ಈ ವೇಳೆ ಜಿ.ಕೆ. ಮಠದ, ಪಿ.ಎನ್. ಪಾಟೀಲ, ಸಿ.ಪಿ. ಜನವಾಡ, ಡಿ.ಎಂ. ದಾಸರ, ಭೀಮಶಿ ಮಗದುಮ್ಮ, ರಾಜು ಟಂಕಸಾಲಿ, ರಾಜು ಬಿಸರಡ್ಡಿ, ಶ್ರಿಶೈಲ ದಬಾಡಿ, ಸುರೇಶ ಕೊಲ್ಹಾರ, ಬಿ.ಆರ್.ಸಿ ಅವಟಿ, ನ್ಯಾಮಗೌಡ್ರ, ದಾಸರೆಡ್ಡಿ, ವೆಂಕಣ್ಣ ಗಿಡ್ಡಪ್ಪನವರ ಇತರರು ಉಪಸ್ಥಿತರಿದ್ದರು. ಐ.ಜಿ. ನ್ಯಾಮಗೌಡ್ರ ಸ್ವಾಗತಿಸಿದರು, ಬಸವರಾಜ ಮಹಾಲಿಂಗೇಶ್ವರಮಠ ವಂದಿಸಿದರು, ಗಿರೀಶ ಆನಿಖಿಂಡಿ ಸ್ವಾಗತಿಸಿದರು.