ಸಾಮಾಜಿಕ ಅನಿಷ್ಠಗಳಿಗೆ ಶಿಕ್ಷಣವೇ ಪರಿಣಾಮಕಾರಿ ಮದ್ದು

| Published : May 27 2025, 01:06 AM IST

ಸಾರಾಂಶ

ಶಿಕ್ಷಣವೇ ಸಾಮಾಜಿಕ ಅನಿಷ್ಠಗಳಿಗೆ ಪರಿಣಾಮಕಾರಿ ಮದ್ದು. ಹಾಗಾಗಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಅಕ್ಷರಜ್ಞಾನ ಪಡೆದು, ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದ್ದಾರೆ.

- ಬೀದಿನಾಟಕ, ಜನಪದ ಗೀತೆಗಳ ಕಾರ್ಯಾಗಾರದಲ್ಲಿ ಪತ್ರಕರ್ತ ಮಲ್ಲೇಶ್‌ ಅಭಿಮತ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಶಿಕ್ಷಣವೇ ಸಾಮಾಜಿಕ ಅನಿಷ್ಠಗಳಿಗೆ ಪರಿಣಾಮಕಾರಿ ಮದ್ದು. ಹಾಗಾಗಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಅಕ್ಷರಜ್ಞಾನ ಪಡೆದು, ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.

ಇಲ್ಲಿಗೆ ಸಮೀಪದ ಬೈಪಾಸ್‌ನಲ್ಲಿ ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಬೀದಿನಾಟಕ ಮತ್ತು ಜನಪದ ಗೀತೆಗಳ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಚ್ಛತೆ, ಜಾಗೃತಿ ಮೂಡಿಸುವುದು, ಹೋರಾಟಗಳ ಬೆಂಬಲ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ, ಮೌಢ್ಯತೆ ಮತ್ತಿತರೆ ವಿಷಯಗಳ ಕುರಿತು ವೇದಿಕೆ ಬೆಳಕು ಚೆಲ್ಲಲಿದೆ. ಬೀದಿನಾಟಕ ಕಲಾವಿದರನ್ನು ರಾಜಕಾರಣಿಗಳು ಕುಡಿಸಿ, ಹಣ ನೀಡಿ ತಮ್ಮ ಕಾರ್ಯಗಳಿಗೆ ಬಳಸಿಕೊಳ್ಳುವಂಥ ಬೆಳವಣಿಗೆ ಸಲ್ಲದು ಹಾಗೂ ವಿಷಾದನೀಯ ಎಂದು ತಿಳಿಸಿದ ಅವರು, ಕ್ರಾಂತಿ ಗೀತೆಗಳ ಮೂಲಕ ಜನರನ್ನು ಎಚ್ಚರಿಸುವ ಕಾರ್ಯವಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸ್ವಾತಂತ್ರ್ಯ ನಂತರವೂ ಆರ್ಥಿಕ ಅಸಮಾನತೆ, ಜಾತೀಯತೆ ತೊಲಗಿಲ್ಲ. ಶಿಕ್ಷಣದ ಕೊರತೆಯಿಂದ ಹೊಸ ನಾಡು ಕಟ್ಟಲು, ಜಾತ್ಯತೀತ ಮನಸ್ಸುಗಳನ್ನು ಒಂದು ಮಾಡಲು ಸಾಧ್ಯವಾಗುತ್ತಿಲ್ಲ. ಜಾತಿ ಕ್ರೂರವಾಗುತ್ತಿದೆ, ಬರೀ ಸುಳ್ಳುಗಳೇ ಊಟ ಮಾಡುತ್ತವೆ ಎಂದು ಹೇಳಿದರು.

ಬೀದಿನಾಟಕ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ, ತೆರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್, ವಿಭಾಗೀಯ ಸಂಚಾಲಕ ಎಂ.ಶಿವಕುಮಾರ್, ಜಿಲ್ಲಾ ಸಂಚಾಲಕ ಅಂಜಿನಪ್ಪ, ಎನ್‌ಎಲ್ ಪ್ರಕಾಶ್, ಲಕ್ಷ್ಮಣ್ ಹಾಗೂ ವಿವಿಧ ಜಿಲ್ಲೆಗಳ ಬೀದಿನಾಟಕದ ನೂರಾರು ಕಲಾವಿದರು ಹಾಜರಿದ್ದರು.

- - -

-೨೬ಎಂಬಿಆರ್೧.ಜೆಪಿಜಿ:

ಪತ್ರಕರ್ತ ಮಲ್ಲೇಶ್ ಕಂಜಿರ ವಾದ್ಯ ನುಡಿಸುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದರು.