ಶಿಕ್ಷಣ ವ್ಯಾಪಾರೀಕರಣ ಆಗಬಾರದು: ಬಿ.ಕೆ.ಹರಿಪ್ರಸಾದ್‌

| Published : Jul 29 2024, 12:56 AM IST

ಸಾರಾಂಶ

ಸಾಧಕರಿಗೆ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಶಿಕ್ಷಣ ವ್ಯಾಪಾರೀಕರಣವಾದರೆ ಮಕ್ಕಳು ಕೂಡ ಅದನ್ನೇ ಮುಂದುವರಿಸುತ್ತಾರೆ. ಹಾಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ದೃಷ್ಟಿಯಿಂದ ಶಿಕ್ಷಣ ಎಲ್ಲರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಮಂಗಳೂರಿನ ನಾರಾಯಣಗುರು ಯುವ ವೇದಿಕೆಯ ರಜತ ಸಂಭ್ರಮ ಸಲುವಾಗಿ ಇಲ್ಲಿನ ಪುರಭವನದಲ್ಲಿ ಭಾನುವಾರ ಹಮ್ಮಿಕೊಂಡ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಸರ್ಕಾರ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು ಎಂದು ನಿರ್ಣಯ ಕೈಗೊಂಡಿತ್ತು. ಕ್ರಮೇಣ ಮಹಿಳೆಯರೂ ಶಿಕ್ಷಣ ಪಡೆಯಲಾರಂಭಿಸಿದರು. ಆದರೆ ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾನತೆ ಹೆಸರಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಮುಗಿಸುವ ಯತ್ನ ನಡೆಸುತ್ತಿದ್ದಾರೆ. ಆದ್ದರಿಂದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ ಶಿಕ್ಷಣ ಸೌಲಭ್ಯದಲ್ಲಿ ಹೆಚ್ಚಿನ ಒತ್ತು ನೀಡುವ ಕೆಲಸ ಆಗಬೇಕು. ಹಿಂದೆ ಮಠ, ಮಾನ್ಯಗಳು ಉಚಿತ ಶಿಕ್ಷಣ ನೀಡುತ್ತಿದ್ದರೆ, ಈಗ ಅದಾವುದೂ ಇಲ್ಲ. ಅಜೀಂ ಪ್ರೇಮ್‌ಜಿ ಅಂತಹ ಸಾಫ್ಟ್‌ವೇರ್‌ ದಿಗ್ಗಜರು ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಉಚಿತ ಮೊಟ್ಟೆ ಭಾಗ್ಯ ನೀಡುವ ಉದಾರತೆ ತೋರಿಸಿರುವುದು ಶ್ಲಾಘನೀಯ ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ. ಶಿಕ್ಷಣದ ಬಳಿಕ ಮತ್ತೆ ಸಮಾಜ ಬೆಳಗುವವರಾಗಬೇಕು. ಸಾಧನೆಯೊಂದಿಗೆ ತುಳುನಾಡಿನ ಸಂಸ್ಕ್ರತಿ ಹಾಗೂ ಹಿರಿಯರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಲಾ ಶಿಕ್ಷಣದಲ್ಲಿ ಉತ್ತೀರ್ಣರಾದಂತೆ ಜೀವನದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಸಾಧಕರಾಗಬೇಕು ಎಂದರು.ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಸುದರ್ಶನ್ ಕೊಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಣ ತಜ್ಞೆ ಶಶಿಲೇಖ, ಸಹಕಾರಿ ರಂಗದ ಸಾಧಕ, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಚಿತ್ತರಂಜನ್ ಬೋಳಾರ್, ಕಂಬಳದ ಕಂಬಳದ ಯುವ ಸಾಧಕ ತ್ರಿಶಾಲ್ ಪೂಜಾರಿ, ಪೊಲೀಸ್ ಅಧಿಕಾರಿ ಹರೀಶ್ ಪದವಿನಂಗಡಿ ಇವರನ್ನು ಸನ್ಮಾನಿಸಲಾಯಿತು. ಸಾಧಕರಿಗೆ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್‌ ಆರ್. ಪೂಜಾರಿ, ನಮ್ಮ ಕುಡ್ಲ ಸಂಸ್ಥೆಯ ಮುಖ್ಯಸ್ಥ ಲೀಲಾಕ್ಷ ಕರ್ಕೆರಾ, ಡೀನೆಟ್ ಮೆನೇಜಿಂಗ್ ಡೈರೆಕ್ಟರ್ ಸಂದೇಶ್ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಟಿ. ಸುವರ್ಣ, ಹೋಮಿಯೋಪತಿ ವೈದ್ಯ ಡಾ. ಶಿವಪ್ರಸಾದ್, ಶಿರ್ಡಿಬಾಬಾ ರಿಯಲ್ ಎಸ್ಟೇಟ್ ಮಾಲೀಕ ರತೀಂದ್ರ ನಾಥ್ ಶುಭಹಾರೈಸಿದರು.

ವೇದಿಕೆಯ ಸಹನಿರ್ದೇಶಕ ನೀಲಯ್ಯ ಅಗರಿ ಸ್ವಾಗತಿಸಿದರು. ಸುಮಂತ್ ಸುವರ್ಣ ವಂದಿಸಿದರು. ದಿನೇಶ್ ರಾಯಿ ನಿರೂಪಿಸಿದರು.