ಜಾತಿ ಭೇದ ತೋರದೆ ಎಲ್ಲರಿಗೂ ತ್ರಿವಿಧ ದಾಸೋಹ ನೀಡುವ ಸಮ ಸಮಾಜದ ಬೆನ್ನೆಲುಬಾಗಿ ನಿಂತಿರುವ ವೀರಶೈವ ಲಿಂಗಾಯತ ಮಠಮಾನ್ಯಗಳ ನೆರವಿನ ಫಲವಾಗಿ ಎಲ್ಲ ಸಮುದಾಯ ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಜಾತಿ ಭೇದ ತೋರದೆ ಎಲ್ಲರಿಗೂ ತ್ರಿವಿಧ ದಾಸೋಹ ನೀಡುವ ಸಮ ಸಮಾಜದ ಬೆನ್ನೆಲುಬಾಗಿ ನಿಂತಿರುವ ವೀರಶೈವ ಲಿಂಗಾಯತ ಮಠಮಾನ್ಯಗಳ ನೆರವಿನ ಫಲವಾಗಿ ಎಲ್ಲ ಸಮುದಾಯ ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಿದ್ದ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಸಮಾವೇಶ ಮತ್ತು ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರೇತಾಯುಗದಿಂದಲೂ ಸಹ ಅಸ್ತಿತ್ವದಲ್ಲಿರುವ ವೀರಶೈವ ಲಿಂಗಾಯತ ಧರ್ಮ ಎಲ್ಲ ಕಾಲದಲ್ಲಿಯೂ ಸಹ ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮುನ್ನಡೆಯುತ್ತಿದೆ. ಬಸವೇಶ್ವರರು ಆರಂಭಿಸಿದ್ದ ಅನುಭವ ಮಂಟಪದಲ್ಲಿ ಅಂದಿನ ಎಲ್ಲ ಸಮಾಜದ ಶರಣರಿಗೂ ಸ್ಥಾನ ನೀಡಲಾಗಿತ್ತು ಎನ್ನುವುದನ್ನು ವಚನಗಳಲ್ಲಿ ಕಾಣಬಹುದಾಗಿದೆ. ಇದರರ್ಥ ವೀರಶೈವ ಲಿಂಗಾಯತರು ಯಾರನ್ನೂ ಸಹ ಇವನಾರವ ಇವನಾರವ ಎನ್ನದೇ ಇವ ನಮ್ಮವ ನಮ್ಮವ ಎನ್ನುವ ಮೂಲಕ ಸಮಸಮಾಜ ನಿರ್ಮಾಣದಲ್ಲಿ ತನ್ನದೇಯಾದ ಕೊಡುಗೆ ನೀಡಿದೆ. ಈಗಲೂ ಸಹ ನಾಡಿನ ಎಲ್ಲ ವೀರಶೈವ ಲಿಂಗಾಯತ ಮಠಗಳು ಎಲ್ಲ ಸಮಾಜದ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಎಲ್ಲ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಬೆಂಬಲವಾಗಿ ನಿಂತಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜ್ಯೋತಿ ಗಣೇಶ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಬಹುತೇಕ ಯಶಸ್ವಿ ನಾಯಕರು ಧರ್ಮ ಛತ್ರ, ಹಾಸ್ಟೆಲ್ಗಳು ಮತ್ತು ಮಠಗಳಲ್ಲಿ ಓದಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ ಎಂದರು.ಸಿದ್ದಗಂಗಾ ಮಠದಲ್ಲಿ ಓದಿದ ವಿದ್ಯಾರ್ಥಿಗಳು ಪ್ರಪಂಚದ ಎಲ್ಲೆಡೆಯೂ ಇದ್ದಾರೆ. ಇದು ಸಮುದಾಯದ ಹೆಮ್ಮೆಯ ವಿಚಾರ. ರಾಜ್ಯದಲ್ಲಿ 50-60 ಶಾಸಕರಿದ್ದರು.ಬಹುತೇಕರು ಹೈದ್ರಾಬಾದ್ ಕರ್ನಾಟಕ ಮತ್ತು ಬಾಂಬೆ ಕರ್ನಾಟಕ ಭಾಗದವ ರಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ 4-5 ಜನ ಶಾಸಕರು ಮಾತ್ರ ವೀರಶೈವ ಲಿಂಗಾಯಿತರಿದ್ದಾರೆ. ನಮ್ಮ ಸಂಖ್ಯೆ ಹೆಚ್ಚಬೇಕೆಂದರೆ ಬೇರೆ ಸಮುದಾಯಗಳ ಜೊತೆಗೆ ಹೊಂದಾಣಿಕೆ ಅಗತ್ಯ. ಇಲ್ಲದಿದ್ದಲ್ಲಿ ರಾಜಕೀಯ ಆಸ್ಥಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜು ಮಾತನಾಡಿ, ಕರ್ನಾಟಕ ಅಭಿವೃದ್ದಿ ಪಥದಲ್ಲಿದ್ದರೆ, ಅದಕ್ಕೆ ಮಠ ಮಾನ್ಯಗಳ ಕೊಡುಗೆ ಆಪಾರ. ಮಠ ಮಾನ್ಯಗಳು ಜಾತಿ, ಧರ್ಮ ನೋಡದೆ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ ಪರಿಣಾಮ ಇಂದು ಕರ್ನಾಟಕ ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ. ಜಿಡಿಪಿ ಬೆಳವಣಿಗೆಯಲ್ಲಿ ಐದನೇ ಸ್ಥಾನದಲ್ಲಿದೆ. ಪೋಷಕರು ಕೇವಲ ಅಂಕಗಳಿಗೆ ಮಹತ್ವ ನೀಡದೆ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕು. ವೈದ್ಯಕೀಯ ಶಿಕ್ಷಣ,ಎಂಜಿನಿಯರಿಂಗ್, ಇನ್ನಿತರ ಸ್ನಾತಕೋತ್ತರ ಪದವಿ ಪಡೆದವರು ಭಯೋತ್ಪಾಧಕರಾಗಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದರು.ಬೆಳ್ಳಾವೆಯ ಶ್ರೀಕಾರದೇಶ್ವರ ಮಠದ ವೀರಕಾರದ ಬಸವ ಸ್ವಾಮೀಜಿ, ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಸಂಘದ ಅಧ್ಯಕ್ಷ ಎಂ.ಬಿ.ಷಡಕ್ಷರಿ, ಲೋಕೇಶ್ವರ್, ಶಶಿ ಹುಲಿಕುಂಟೆ ಮಠ, ಅಮೀನ್, ವಿಜ್ಞಾನಿ, ಜಿಲ್ಲಾ ಮಹಿಳಾಧ್ಯಕ್ಷೆ ಮಮತ ದಿವಾಕರ್, ಸಾಗರಹಳ್ಳಿ ನಟರಾಜು, ಡಾ.ಪ್ರಭಾ, ಚೇತನ್, ಎಚ್.ಕೆ.ರುದ್ರೇಶ್, ಕೊಪ್ಪಲ್ನಾಗರಾಜು ಪದಾಧಿಕಾರಿಗಳು ಉಪಸ್ಥಿತರಿದ್ದರು.
