ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಾವು ಮೌಲ್ಯಯುತವಾದ ಶಿಕ್ಷಣ ಮರೆಯಬಾರದು. ಇಂದಿನ ಶಿಕ್ಷಣ ಸಂಸ್ಥೆಗಳು, ಶಾಲಾ, ಕಾಲೇಜುಗಳು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಕೇವಲ ಅಂಕಗಳಿಗೆ ಬೆನ್ನುಹತ್ತದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವ ಶಿಕ್ಷಣವನ್ನು ಒದಗಿಸಬೇಕು ಎಂದು ಜಿಲ್ಲಾ ಕಾನಿಪ ಅಧ್ಯಕ್ಷ ಸಂಗಮೇಶ ಚೂರಿ ಅಭಿಮತ ವ್ಯಕ್ತಪಡಿಸಿದರು.ನಗರದ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೈಟೆಕ್ ಶಿಕ್ಷಣವನ್ನು ಕೊಡುವುದೇ ನಮ್ಮ ಶಿಕ್ಷಣ ಸಂಸ್ಥೆಯ ಗುರಿ ಉದ್ದೇಶವಾಗಿದೆ. ಪ್ರಸಕ್ತ ವರ್ಷದಲ್ಲಿ ನರ್ಸರಿ, ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿವೆ. ನಮ್ಮ ಶಿಕ್ಷಣ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಿದೆ. ಪಾಲಕ ಬಂಧುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಸಂಯೋಜಕ ಎ.ಕೆ.ದಳವಾಯಿ ಮಾತನಾಡಿ ಬಾಲ್ಯದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮುಂದೆ ಆ ಮಕ್ಕಳು ಜ್ಞಾನದ ಬಂಡಾರವಾಗಿ ಜಗವನ್ನು ಬೆಳಗುತ್ತಾರೆ ಎಂದರು.ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಮುಖ್ಯ. ಈ ಕನಕದಾಸ ಶಿಕ್ಷಣ ಸಂಸ್ಥೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಕಲಿಸುವ ಮಹತ್ತರ ಗುರಿಯನ್ನು ಇಟ್ಟುಕೊಂಡಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ಮಾತನಾಡಿದರು. ಶಿಕ್ಷಕ, ಸಾಹಿತಿ ಆರ್.ಎಸ್.ಪಟ್ಟಣಶೆಟ್ಟಿ ಶಿಕ್ಷಣದ ಮಹತ್ವವನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವ್ಹಿ.ಸಿ.ನಾಗಠಾಣ ಮಾತನಾಡಿ ಮಕ್ಕಳಿಗೆ ಶಿಕ್ಷಣ ಕೊಟ್ಟರಷ್ಟೇ ಸಾಲದು ಉತ್ತಮ ಸಂಸ್ಕಾರವನ್ನು ನೀಡಬೇಕು. ಪಾಲಕರು ಮೊಬೈಲ್ ಬದಲಾಗಿ ಮಕ್ಕಳ ಕೈಯಲ್ಲಿ ಪುಸ್ತಕವನ್ನು ಕೊಟ್ಟು ಉತ್ತಮ ಜ್ಞಾನವಂತರನ್ನಾಗಿ ಮಾಡಬೇಕೆಂದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.95.70 ರಷ್ಟು ಅಂಕಗಳನ್ನು ಪಡೆದುಕೊಂಡು ತಿಕೋಟಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಬಿ.ಜತ್ತಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಹೂಗಾರ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗುಗದಡ್ಡಿ ಗ್ರಾಮದ ಸಿದ್ದಪ್ಪ ದೇಗಿನಾಳ, ಬಸವರಾಜ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಟಕ್ಕಳಕಿ ಗ್ರಾಮದ ಪ್ರಮುಖರಾದ ಮಧುಕರ ಜಾದವ, ವಿಠ್ಠಲ ಪೂಜಾರಿ, ಗಣಪತಿ ಒಡೆಯರ, ಶಿವಾನಂದ ಹಂಜಗಿ, ಸಿದ್ದಪ್ಪ ಪೂಜಾರಿ, ಸುನೀಲ ಜೈನಾಪುರ, ಶ್ರೀಶೈಲ ಕಂಬಳಿ, ಸಂಗಮೇಶ ಕೊಳಮಲಿ ಸಹ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಕಾವ್ಯ ಪೂಜಾರಿ ಪ್ರಾರ್ಥಿಸಿದರು, ಸಂಚಾಲಕ ಕೆ.ರಾಮು ನಿರೂಪಿಸಿದರು, ಸಂತೋಷ ಹೆಗಡೆ ವಂದಿಸಿದರು.