ಬಸವ ಪುರಾಣದಿಂದ ಶೈಕ್ಷಣಿಕ, ಧಾರ್ಮಿಕ ಕ್ರಾಂತಿ: ದಿಂಗಾಲೇಶ್ವರ ಶ್ರೀ

| Published : Feb 20 2025, 12:47 AM IST

ಸಾರಾಂಶ

ಉತ್ತರ ಭಾರತದಲ್ಲಿ ಭಕ್ತಿ ಹೆಚ್ಚಾಗಲು ಭಾಗವತ ಪುರಾಣ ಕಾರಣವಾದರೆ ದಕ್ಷಿಣ ಭಾರತದಲ್ಲಿ ಭಕ್ತಿ ಹೆಚ್ಚಾಗಲು ಬಸವ ಪುರಾಣ ಕಾರಣ

ಕನ್ನಡಪ್ರಭ ವಾರ್ತೆ ಕಮತಗಿ

ಉತ್ತರ ಭಾರತದಲ್ಲಿ ಭಕ್ತಿ ಹೆಚ್ಚಾಗಲು ಭಾಗವತ ಪುರಾಣ ಕಾರಣವಾದರೆ ದಕ್ಷಿಣ ಭಾರತದಲ್ಲಿ ಭಕ್ತಿ ಹೆಚ್ಚಾಗಲು ಬಸವ ಪುರಾಣ ಕಾರಣವಾಗುವುದರ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಔದ್ಯೋಗಿಕ ಕ್ರಾಂತಿ ಮಾಡಲು ಕಾರಣವಾಯಿತು ಎಂದು ಶಿರಹಟ್ಟಿ ಶ್ರೀ ಫಕೀರೇಶ್ವರ ಸಂಸ್ಥಾನಮಠದ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದಲ್ಲಿ ನೂತನ ರಥ ಬೀದಿಯ ಆವರಣದಲ್ಲಿನ ಲಿಂ. ದಾನಪ್ಪ ಶಂಕ್ರಪ್ಪ ಮುಳಗುಂದ ಪ್ರಧಾನ ವೇದಿಕೆಯಲ್ಲಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಹೊಳೆ ಹುಚ್ಚೇಶ್ವರ ಮಹಾಸ್ವಾಮೀಜಿ 25ನೇ ವರ್ಷದ ಪಟ್ಟಾಧಿಕಾರ ರಜತ ಮಹೋತ್ಸವದ ನಿಮಿತ್ತ ನಡೆದ ಬಸವ ಪುರಾಣ ಮಹಾಮಂಗಲ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಬಸವಾದಿ ಶರಣರು ಹೇಳಿದ ಹಾಗೇ ಮನುಷ್ಯನ ಹೊರಗಿನ ಆಕಾರಕ್ಕೆ ಹೆಚ್ಚು ಬೆಲೆಕೊಡದೆ ಮನುಷ್ಯನೊಳಗಿನ ಸಾಧನೆ ಎಂದಿಗೂ ಅಳಿಸುವದಿಲ್ಲವೆಂದು ಒಳಗಿನ ಸಾಧನೆಗೆ ಹೆಚ್ಚು ಬೆಲೆಕೊಟ್ಟಿದ್ದರು ಎಂದರು.

ಬಸವಾದಿ ಶರಣರು ಹೇಳಿದಂತೆ ಮನುಷ್ಯನ ಹೊರಗಿನ ಆಕಾರ ಯಾವಾಗ ಬೇಕಾದರು ನಶಿಸಿಹೋಗುತ್ತದೆ. ಆದರೆ ಅವರು ಮಾಡಿದ ಸಾಧನೆ ಎಂದಿಗೂ ಅಳಿಸಿಹೋಗುವುದಿಲ್ಲ. ಇದಕ್ಕೆ ಉದಾಹರಣೆಯೆಂದರೆ ಬಸವಣ್ಣನವರ ಬಸವ ಪುರಾಣವೆ ಸಾಕ್ಷಿಯಾಗಿದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ, ಆಚಾರ, ವಿಚಾರ ಕಲಿಸಿಕೊಟ್ಟು ಅವರನ್ನು ಉತ್ತಮ ಜ್ಞಾನಿಗಳನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದರೆ ಇಡೀ ಜಗತ್ತೆ ಅವರನ್ನು ಗುರುತಿಸುವುದರ ಜೊತೆಗೆ ಕೊಂಡಾಡುತ್ತದೆ ಎಂದರು.

ದಿವ್ಯಸಾನ್ನಿಧ್ಯ ಹುಕ್ಕೇರಿ ಗುರುಶಾಂತೇಶ್ವರಮಠದ ಚಂದ್ರಶೇಖರ ಶ್ರೀ, ಅಧ್ಯಕ್ಷತೆ ಮುನವಳ್ಳಿ ಸೋಮಶೇಖರಮಠ ಮುರುಘೇಂದ್ರ ಶ್ರೀ, ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತಮಠ ಕುಮಾರ ವಿರುಪಾಕ್ಷ ಶ್ರೀ, ಕಮತಗಿ ಹೊಳೆ ಹುಚ್ಚೇಶ್ವರ ಶ್ರೀ, ಹೊಸಹಳ್ಳಿ ಬೂದಿಶ್ವರ ಶ್ರೀ, ಅಮೀನಗಡ ಶಂಕರ ರಾಜೇಂದ್ರ ಶ್ರೀ, ಬೈಲಹೊಂಗಲ ಪ್ರಭುನೀಲಕಂಠ ಶ್ರೀ, ಮುಖಂಡರಾದ ಹನಮಂತ ಮಾವಿನಮರದ, ಸಂತೋಷ ಹೊಕ್ರಾಣಿ, ಮುಚಖಂಡಯ್ಯ ಹಂಗರಗಿ, ಉದ್ಯಮಿ ಎಚ್.ಪಿ.ರಾಜಗೋಪಾಲರೆಡ್ಡಿ, ಜಿ.ಎಸ್ ದೇಸಾಯಿ, ಭುಜಂಗರಾವ ದೇಸಾಯಿ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಹಾಗೂ ಪಟ್ಟಾಧಿಕಾರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ, ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಪಪಂ ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ ಸೇರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹುಚ್ಚೇಶಶ್ರೀ ಪ್ರಶಸ್ತಿ -2025 ಪ್ರದಾನ

ಹೊಳೆಹುಚ್ಚೇಶ್ವರಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಮಾಡಲಾಗುವ ಹುಚ್ಚೇಶ ಶ್ರೀ 2025ನೇ ಸಾಲಿನ ಪ್ರಶಸ್ತಿಯನ್ನು ಬೆಂಗಳೂರ ಉದ್ಯಮಿ ಎಚ್.ಪಿ.ರಾಜಗೋಪಾಲರೆಡ್ಡಿಗೆ ಶ್ರೀಮಠದಿಂದ ಪ್ರದಾನ ಮಾಡಿ ಗೌರವಿಸಲಾಯಿತು.