ಸಂಸದೆ ಕೃಪೆ: ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ದೆಹಲಿ ಶೈಕ್ಷಣಿಕ ಪ್ರವಾಸ

| Published : Oct 27 2025, 12:15 AM IST

ಸಂಸದೆ ಕೃಪೆ: ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ದೆಹಲಿ ಶೈಕ್ಷಣಿಕ ಪ್ರವಾಸ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 9 ಎಸ್‌ಎಸ್‌ಎಲ್‌ಸಿ ಟಾಪರ್‌ ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ನವದೆಹಲಿಗೆ ಐದು ದಿನಗಳ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದಾರೆ.

- 9 ವಿದ್ಯಾರ್ಥಿಗಳಿಗೆ 5 ದಿನಗಳ ಪ್ರವಾಸ ಆಯೋಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 9 ಎಸ್‌ಎಸ್‌ಎಲ್‌ಸಿ ಟಾಪರ್‌ ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ನವದೆಹಲಿಗೆ ಐದು ದಿನಗಳ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದಾರೆ.

ತಮ್ಮ ಗೃಹ ಕಚೇರಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಅವರ ಅನಿಸಿಕೆಗಳನ್ನು ಆಲಿಸಿ ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿಗಳು ಇಂಡಿಯಾ ಗೇಟ್, ಕಮಲ ಮಂದಿರ, ಕುತುಬ್ ಮಿನಾರ್, ಕೆಂಪುಕೋಟೆ, ಕರ್ತವ್ಯಪಥ ಮತ್ತು ಸ್ವಾಮಿ ನಾರಾಯಣ ಮಂದಿರ ಮುಂತಾದ ರಾಷ್ಟ್ರದ ಪ್ರಮುಖ ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಶಿಕ್ಷಕರೂ ಜೊತೆಯಾಗಿ ತೆರಳಲಿದ್ದಾರೆ. ಈ ತಂಡವು ಸೋಮವಾರ ಸಂಜೆ 5-30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.

ಸಂಸದೆ ಡಾ.ಪ್ರಭಾ ಈ ಸಂದರ್ಭ ಮಾತನಾಡಿ, ಈ ಶೈಕ್ಷಣಿಕ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಬೆಳೆಸುವುದಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೇರೇಪಿಸಲು ಉದ್ದೇಶಿಸಿದ್ದೇವೆ. ಹೊನ್ನಾಳಿಯ ಇಬ್ಬರು ಅಸಾಧಾರಣ ವಿದ್ಯಾರ್ಥಿಗಳನ್ನು ಸಹ ಸೇರಿಸಿಕೊಂಡು ಒಟ್ಟಾರೆ ಒಂಬತ್ತು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಪ್ರಯಾಣ, ವಿಮಾನ ದರ ಹಾಗೂ ವಸತಿ ಸೇರಿದಂತೆ ಎಲ್ಲ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು ಎಂದರು.

ಟಾಪರ್‌ ಸಾಧಕರ ನೋಡುವುದರಿಂದ ಪ್ರಸ್ತುತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬ್ಯಾಚ್‌ಗೂ ಸಾಧನೆಗೆ ಪ್ರೇರಣೆ ಸಿಗುತ್ತದೆ. ಅವರು ಕೂಡ ಶ್ರದ್ಧೆಯಿಂದ ಅಧ್ಯಯನ ಮಾಡಿ, ಉತ್ತಮ ಫಲಿತಾಂಶ ಗಳಿಸಲು ಪ್ರೋತ್ಸಾಹಿತರಾಗುತ್ತಾರೆ. ಆದ್ದರಿಂದ ಈ ಪ್ರವಾಸ ಏರ್ಪಡಿಸಲಾಗಿದೆ ಎಂದರು.

ಈ ವೇಳೆ ವಿದ್ಯಾರ್ಥಿಗಳಾದ ಪಿ. ಮಂಜುನಾಥ್, ಧನುಷ್ ಬಿ.ಎನ್., ಪವನ್ ಕುಮಾರ್ ಕೆ.ಪಿ., ಜೇಷ್ಟಾ ಬಿ., ಅಮೃತಾ ಟಿ.ಎಂ., ಮಿಜ್ಬಾ ನಾಜ್, ಉಷಾ ಎಚ್., ಲತಾ ಎಚ್.ಎ. ಮತ್ತು ಯೋಗೇಶ್ವರಿ ಜೆ.ಬಿ. ಅವರೊಂದಿಗೆ ಶಿಕ್ಷಕರಾದ ಬಿ.ಅರುಣ್ ಕುಮಾರ್ ಮತ್ತು ಕೆ.ಎಂ. ನಿಂಗಮ್ಮ ತೆರಳಲಿದ್ದಾರೆ.

ಧನ್ಯವಾದ ಹೇಳಿದ ವಿದ್ಯಾರ್ಥಿಗಳು:

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದೆಹಲಿ ಶೈಕ್ಷಣಿಕ ಪ್ರವಾಸದ ವ್ಯವಸ್ಥೆ ಮಾಡಿದ ವಿಚಾರ ತಿಳಿದು ವಿದ್ಯಾರ್ಥಿಗಳು ಸಂತೋಷ‌ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಲ್ಲ ವಿದ್ಯಾರ್ಥಿಗಳು ಸಂಸದರನ್ನು ಭೇಟಿಯಾಗಿ, ಅವರೊಂದಿಗೆ ಮಾತುಕತೆ ನಡೆಸಿ, ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು.

- - -

-25ಕೆಡಿವಿಜಿ34, 35:

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಸ್ಎಸ್ಎಲ್‌ಸಿ ಟಾಪರ್‌ಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದೆಹಲಿ ಶೈಕ್ಷಣಿಕ ಪ್ರವಾಸ ಅವಕಾಶ ಕಲ್ಪಿಸಿದ್ದು, ಟಾಪರ್‌ಗಳ ಜತೆ ಮಾತುಕತೆ ನಡೆಸಿದರು.