ಬಾಬಾ ಸಾಹೇಬರು ಸಂವಿಧಾನದಲ್ಲಿ ನೀಡಿರುವ ಕಾನೂನುಗಳು ಮತ್ತು ಮಾನವ ಹಕ್ಕುಗಳೂ ಕೂಡ ಪ್ರಮುಖವಾಗಿದ್ದು, ಅವುಗಳನ್ನೂ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೀಡಿಕೊಳ್ಳಬೇಕು. ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಸ್ಪಷ್ಟ ದಾರಿ ತೋರಿಸಿದ್ದಾರೆ. ನಾವು ಮುನ್ನಡೆಯಬೇಕಷ್ಟೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಮಾನವ ಹಕ್ಕುಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಡಿಐಜಿ ಹನುಮಂತರಾಯ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ಸಮಾಜಬಕಲ್ಯಾಣ ಇಲಾಖೆಯ ಡಾ.ಬಿ‌.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ‘ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ಭಾರತ: ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವ ಅಭಿವೃದ್ಧಿಯ ಮರುಚಿಂತನೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬರು ಸಂವಿಧಾನದಲ್ಲಿ ನೀಡಿರುವ ಕಾನೂನುಗಳು ಮತ್ತು ಮಾನವ ಹಕ್ಕುಗಳೂ ಕೂಡ ಪ್ರಮುಖವಾಗಿದ್ದು, ಅವುಗಳನ್ನೂ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೀಡಿಕೊಳ್ಳಬೇಕು. ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಸ್ಪಷ್ಟ ದಾರಿ ತೋರಿಸಿದ್ದಾರೆ. ನಾವು ಮುನ್ನಡೆಯಬೇಕಷ್ಟೆ ಎಂದರು.

ಸಂವಿಧಾನದಲ್ಲಿ ಮೂಲಭೂತ ಹಕ್ಕು, ಕರ್ತವ್ಯ ಮತ್ತು ಪ್ರಜಾಪ್ರಭುತ್ವ ಎಲ್ಲವೂ ಅಡಗಿದೆ. ಸಂವಿಧಾನವು ಹೃದಯ ಇದ್ದಂತೆ. ಅದರ ಪ್ರಸ್ತಾವನೆಯು ಮಾರ್ಗದರ್ಶಕವಾಗಿದೆ. ನಾವು ಈಗ ಕೇಳುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಸಂವಿಧಾನದಲ್ಲಿಯೇ ಪರಿಹಾರವಿದೆ. ಜಾತಿ ಪದ್ಧತಿ, ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ, ಜೀತ ಪದ್ಧತಿ, ಮೀಸಲಾತಿ ಎಲ್ಲವೂ ಅದರಲ್ಲಿ ಅಡಕವಾಗಿದೆ. ಅಂತಹ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿರುವುದಾಗಿ ಅವರು ಹೇಳಿದರು.

ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ನಡೆಸುವುದಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. ನಾನು ಪೊಲೀಸ್‌ ಇಲಾಖೆಗೆ ಬರುವ ಮುನ್ನ ಕೃಷಿ ಯೋಜನೆಗಳ ಅನುಷ್ಠಾನ ನೋಡಿಕೊಳ್ಳುತ್ತಿದ್ದೆ. ನಿಜ ಹೇಳುವುದಾದರೆ ಸರ್ಕಾರ ಯಾವುದೇ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ, ನಿಯಮಗಳು, ಸಾರ್ವಜನಿಕರಲ್ಲಿ ಅರಿವಿನ ಕೊರತೆ ಮುಂತಾದ ಕಾರಣಗಳಿಂದ ಎಂದರು.

ಬ್ಯಾಂಕ್ ನಲ್ಲಿ ಖಾತೆ ಆರಂಭಿಸಿದಾಕ್ಷಣ ಬದಲಾವಣೆ ಆಗುವುದಿಲ್ಲ. ಏಕೆಂದರೆ ಫಲಾನುಭವಿಗಳು ಆರ್ಥಿಕವಾಗಿ ಸದೃಢರಾಗಬೇಕು. ಅಭಿವೃದ್ಧಿ ಎಂಬುದು ಹೇಗೆ ಆಗಬೇಕು ಎಂಬ ಕುರಿತು ಸರಿಯಾದ ಧಿಕ್ಕಿನಲ್ಲಿ ಚರ್ಚೆ ಆಗಬೇಕು ಎಂದರು.

ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆವಹಿಸಿದ್ದರು. ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ, ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಡೀನ್ ಪ್ರೊ. ರಾಮನಾಥನ್ ನಾಯ್ಡು, ಪರೀಕ್ಷಾಂಗ ಕುಲಸಚಿವ ಆನಂದ್, ಹಣಕಾಸು ಅಧಿಕಾರಿ ನಿರಂಜನ್ ರಾಜ್. ಸಂಘಟನ ಕಾರ್ಯದರ್ಶಿ ಡಾ.ಶಿವಕುಮಾರಸ್ವಾಮಿ ಇದ್ದರು.