ಪ್ರತಿಕೃತಿ ದಹನ ಪ್ರತಿಭಟನೆ ಭಾಗ: ವಿನೋದ್‌ ಪೂಜಾರಿ

| Published : Jun 26 2024, 12:31 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜನಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ನೆಪ ಮಾಡಿಕೊಂಡು ಕೊಡಗಿನ ಕಾಂಗ್ರೆಸ್ಸಿಗರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರತಿಭಟನೆಯ ಒಂದು ಭಾಗವಾಗಿರುವ ಪ್ರತಿಕೃತಿ ದಹನವನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡಬೇಕೆ ಹೊರತು ವೈಯಕ್ತಿಕವಾಗಿ ಪರಿಗಣಿಸಿ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನ ಬೆದರಿಕೆಗಳಿಗೆ ಬಿಜೆಪಿ ಅಂಜುವುದಿಲ್ಲವೆಂದು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ತಿಳಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜನಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ನೆಪ ಮಾಡಿಕೊಂಡು ಕೊಡಗಿನ ಕಾಂಗ್ರೆಸ್ಸಿಗರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ವಿರೋಧ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷದ ಜನವಿರೋಧಿ ಧೋರಣೆ ವಿರುದ್ಧ ಜನಪರವಾಗಿ ಪ್ರತಿಭಟನೆ ನಡೆಸಿದೆ. ಸಾಂಕೇತಿಕವಾಗಿ ಕಾಂಗ್ರೆಸ್ ನಾಯಕರ ಪ್ರತಿಕೃತಿ ದಹಿಸಿದ್ದು, ಇದು ಪ್ರತಿಭಟನೆಯ ಒಂದು ಭಾಗವಾಗಿದೆಯಷ್ಟೆ. ಕಾಂಗ್ರೆಸ್ ಪಕ್ಷ ಕೂಡ ಪ್ರತಿಭಟನೆಗಳನ್ನು ನಡೆಸುವಾಗ ಪ್ರತಿಕೃತಿ ದಹಿಸಿದ ಉದಾಹರಣೆಗಳಿದೆ. ಇದನ್ನು ರಾಜಕೀಯವಾಗಿ ಸ್ವೀಕರಿಸಬೇಕೆ ಹೊರತು ವೈಯುಕ್ತಿವಾಗಿ ಪರಿಗಣಿಸುವುದು ತಪ್ಪು ಎಂದರು.

ಜಾತಿ ಬಣ್ಣ ಬಳಿದು ರಾಜಕೀಯ:

ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನೇ ಗುರಿ ಮಾಡಿ ಜಾತಿಯ ಬಣ್ಣ ಬಳಿಯುತ್ತಿರುವುದು ಕಾಂಗ್ರೆಸ್ ಮಂದಿಯ ಕೀಳು ಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಕಾಂಗ್ರೆಸ್ ಬೆದರಿಕೆಗಳಿಗೆ ಬಿಜೆಪಿ ಎಂದಿಗೂ ಬೆದರುವುದಿಲ್ಲ ಎಂದರು.

ಕೊಡಗಿನ ಜನ ಬಿಜೆಪಿ ಜೊತೆಯಲ್ಲಿದ್ದಾರೆ ಎನ್ನುವುದು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಾಬೀತಾಗಿದೆ. ಈ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಹತಾಶೆಗೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸಬಹುದೆನ್ನುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಪ್ರಯತ್ನ ಫಲ ಕೊಡುವುದಿಲ್ಲ. ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಅಧಿಕಾರ ದುರುಪಯಯೋಗ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಎದುರಿಸುವ ಶಕ್ತಿ ಬಿಜೆಪಿಗೆ ಇದೆ.

ಮೋರ್ಚಾದ ಉಪಾಧ್ಯಕ್ಷ ಕೋಲೆಯಂಡ ಗಿರೀಶ್ ಮಾತನಾಡಿ, ಪ್ರತಿಕೃತಿ ದಹನವನ್ನು ನೆಪ ಮಾಡಿಕೊಂಡು ಸಮಾಜದಲ್ಲಿ ಒಡಕು ಮೂಡಿಸಿ ವಾಮಮಾರ್ಗದ ಮೂಲಕ ರಾಜಕೀಯ ಮಾಡುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಎ.ಎಸ್.ಪೊನ್ನಣ್ಣ ಅವರು ಕೇವಲ ಒಂದು ವರ್ಗದ ಶಾಸಕರಲ್ಲ, ಅವರು ಎಲ್ಲರಿಗೂ ಶಾಸಕರಾಗಿದ್ದಾರೆ. ಅಭಿವೃದ್ಧಿಪರ ಚಿಂತನೆ ಮಾಡದೆ ಕೇವಲ ಬಿಜೆಪಿಯನ್ನು ಗುರಿ ಮಾಡಿದರೆ ಎಲ್ಲಾ ಶಕ್ತಿ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೋರ್ಚಾದ ಸದಸ್ಯರಾದ ಪುಲಿಯೇರಿ ಸುದೀಶ್, ಉಮಾಪ್ರಭು ಹಾಗೂ ವಿರಾಜಪೇಟೆ ಮಂಡಲದ ಅಧ್ಯಕ್ಷ ಪಿ.ಟಿ.ನವೀನ್ ಉತ್ತಯ್ಯ ಇದ್ದರು.