ಇಲ್ಲಿನ ತೇಜಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಪಳವಳ್ಳಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕೇಂದ್ರದ 70 ಮಕ್ಕಳಿಗೆ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಇಲ್ಲಿನ ತೇಜಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಪಳವಳ್ಳಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕೇಂದ್ರದ 70 ಮಕ್ಕಳಿಗೆ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.

ಇದೇ ವೇಳೆ ತೇಜಸ್‌ ಚಾರಿಟಬಲ್‌ ಟ್ರಸ್ಟ್‌ ಕಾರ್ಯದರ್ಶಿ ಗಾಯಿತ್ರಿ ಬಾಯಿ ಅವರು ಮಾತನಾಡಿ, ಅಂಗನವಾಡಿ ಶಿಕ್ಷಕಿಯರ ಶ್ರಮದಿಂದ ಪೋಷಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತೋಷದಾಯಕ ಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಂಡು ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಉತ್ತಮ ಶಿಕ್ಷಣ ನೀಡಿದರೆ ಅದು ಪೋಷಕರಿಗೆ ಹೆಮ್ಮೆಯ ವಿಷಯವಾಗುತ್ತದೆ ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಮನೋಭಾವನ್ನು ಎದುರಿಸಲು ಶಿಕ್ಷಣ ಬಹು ಮುಖ್ಯ.ಮಕ್ಕಳಿಗೆ ಮನೆಯೇ ಮೊದಲ ಶಾಲೆಯಾಗಿ ಇರುವುದರಿಂದ ಪ್ರತಿಯೊಬ್ಬ ಪೋಷಕರು ಎಷ್ಟೇ ಕೆಲಸವಿದ್ದರೂ ಮಕ್ಕಳಿಗಾಗಿ ಸ್ವಲ್ಪ ಸಮಯವನ್ನು ಕಾಯ್ದಿರಿಸಿ ಶಿಕ್ಷಣದ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಕರೆ ನೀಡಿದರು.ತೇಜಸ್ ಎಜ್ಯುಕೇಶನಲ್ ಚಾರಿಟಬಲ್ ಟ್ರಸ್ಟ್ ಮಾರ್ಗದರ್ಶಕರಾದ ಶಂಕರ್ ಮೂರ್ತಿ ಮಾತನಾಡಿ, ಟ್ರಸ್ಟ್ ವತಿಯಿಂದ ಕಳೆದ ವರ್ಷ ತಾಲೂಕಿನ ವಿವಿಧ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ, ನೋಟ್ ಪುಸ್ತಕ, ಬ್ಯಾಗ್ ಹಾಗೂ ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ, ಗಾಯಿತ್ರಿ ಬಾಯಿ ಅವರ ಸಮಾಜಸೇವಾ ಮನೋಭಾವವನ್ನು ಶ್ಲಾಘಿಸಿ, ಹೃದಯ ಶ್ರೀಮಂತಿಕೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವುದು ಪ್ರೇರಣಾದಾಯಕ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಮಕೃಷ್ಣ ನಾಯಕ,ಶ್ರೀರಾಮಪ್ಪ,ಕನುಮಪ್ಪ ರಾಮಾಂಜಿನಪ್ಪ, ಓಬಳೇಶಪ್ಪ, ನಾಗರಾಜು, ಸುರೇಶ್, ಗೋಪಾಲಪ್ಪ, ವರಲಕ್ಷ್ಮಿ ಅಂಗನವಾಡಿ ಶಿಕ್ಷಕರಾದ ಪವಿತ್ರಮ್ಮ, ರಾಮಾಂಜಿನಮ್ಮ, ಸಾವಿತ್ರಮ್ಮ, ಗುಲ್ಜಾರಮ್ಮ ಊರಿನ ಪ್ರಮುಖರು, ಪೋಷಕರು ಹಾಗೂ ತೇಜಸ್ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.