ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಯತ್ನ: ಸಂಸದ ಬಸವರಾಜ ಬೊಮ್ಮಾಯಿ

| Published : Nov 23 2025, 03:00 AM IST

ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಯತ್ನ: ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದಲ್ಲಿ ಸಮರ್ಪಕ ನೀರಾವರಿ ಮಾಡಿ ಇಲ್ಲಿನ ಭೂಮಿತಾಯಿ ಹಸಿರಿನಿಂದ ಕಂಗೊಳಿಸಬೇಕೆನ್ನುವುದು ನನ್ನ ಬಹುದಿನಗಳ ಕನಸಾಗಿದೆ. ಇದೀಗ ಇಲ್ಲಿನ ಸಂಸದನಾಗಿ ಆಯ್ಕೆಯಾಗಿದ್ದು, ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

ಮುಂಡರಗಿ: ಸಿಂಗಟಾಲೂರು ಏತ ನೀರಾವರಿಯ ಸೂಕ್ಷ್ಮ ಹನಿ ನೀರಾವರಿ ಯೋಜನೆಯು ಯಶಸ್ವಿಯಾಗಬೇಕಾದರೆ ಅದನ್ನು ಮಧ್ಯಪ್ರದೇಶ ಮಾದರಿಯಲ್ಲಿ ಮಾಡಬೇಕಾಗಿದೆ. ಆ ಮಾದರಿಯನ್ನು ಅನುಷ್ಠಾನವಾದರೆ ತಾಲೂಕಿನ ರೈತರಿಗೆ ಸಮರ್ಪಕ ನೀರು ದೊರೆಯುತ್ತದೆ. ಏತ ನೀರಾವರಿ ಕೆಲಸ ಪೂರ್ಣ ಮಾಡಿ ರೈತರ ಜಮೀನಿನಲ್ಲಿ ನೀರು ಹರಿಯುವಂತೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಗ್ನಿ ಮಹೋತ್ಸವ, ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಭಾಗದಲ್ಲಿ ಸಮರ್ಪಕ ನೀರಾವರಿ ಮಾಡಿ ಇಲ್ಲಿನ ಭೂಮಿತಾಯಿ ಹಸಿರಿನಿಂದ ಕಂಗೊಳಿಸಬೇಕೆನ್ನುವುದು ನನ್ನ ಬಹುದಿನಗಳ ಕನಸಾಗಿದೆ. ಇದೀಗ ಇಲ್ಲಿನ ಸಂಸದನಾಗಿ ಆಯ್ಕೆಯಾಗಿದ್ದು, ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಅಲ್ಲದೇ ಮುಂಡರಗಿ ಮಾರ್ಗವಾಗಿ ಗದಗ- ಹರಪನಹಳ್ಳಿ ರೈಲು ಮಾರ್ಗ ಮಾಡುವುದಕ್ಕೆ ತ್ವರಿತಗತಿ ಕೆಲಸ ಮಾಡುತ್ತೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಶ್ರೀಮಠದಿಂದ ವಿದ್ಯಾಸಂಸ್ಥೆ ತೆರೆಯಲಾಯಿತು. ಈಗ ಶತಮಾನೋತ್ಸವ ಆಚರಿಸಲಾಗುತ್ತಿದೆ. ತಾಲೂಕು ಶೈಕ್ಷಣಿಕ ಪ್ರಗತಿ ಸಾಧಿಸಿದೆ. ಅತಿಥಿ ಶಿಕ್ಷಕರ ನೇಮಕ ಮಾಡುವ ಮೂಲಕ ಸಂಸ್ಥೆ ನಡೆಸಲಾಗುತ್ತಿದೆ. ಸರ್ಕಾರದಿಂದ ಶಿಕ್ಷಕರ ನೇಮಕ ಮಾಡಿಕೊಳ್ಳುವ ಕೆಲಸ ನಡೆಯಬೇಕು ಎಂದರು.ಕನಕಗಿರಿಯ ಸುವರ್ಣಗಿರಿ ಸಂಸ್ಥಾನಮಠದ ಡಾ. ಚನ್ನಮಲ್ಲ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ದುಡ್ಡು ಗಳಿಸುವುದು ಮುಖ್ಯವಲ್ಲ, ಅದನ್ನು ಸತ್ಕಾರ್ಯಗಳಿಗೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ನಿಸ್ವಾರ್ಥದಿಂದ ಸೇವೆ ಸಲ್ಲಿಸಬೇಕು. ಭಗವಂತನು ನೀಡಿದ ಜೀವನವನ್ನು ಸಮರ್ಪಕವಾಗಿ ಅನುಭವಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಅನಂತ ಚಿತ್ರಗಾರ ಅವರಿಗೆ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಚಿತ ಸಾಮೂಹಿಕ ವಿವಾಹದಲ್ಲಿ 28 ನವ ವಧು- ವರರು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ವೀರಭದ್ರೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ವೀರೇಶ ತುಪ್ಪದ, ವೀರಭದ್ರೇಶ್ವರ ಮಹಿಳಾ ವೇದಿಕೆ ಅಧ್ಯಕ್ಷೆ ಗೌರಮ್ಮ ಹುರಕಡ್ಲಿ, ಶಿವಕುಮಾರಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಶಿವಪ್ರಕಾಶ ಮಹಾಜನಶೆಟ್ಟರ, ಲಿಂಗರಾಜಗೌಡ ಪಾಟೀಲ, ಸಣ್ಣವೀರಪ್ಪ ಹಳ್ಳೆಪ್ಪನವರ, ವಿ.ಜೆ. ಹಿರೇಮಠ ಸಾಯಿಪ್ರಸನ್ ಅಳವಂಡಿ, ಶರಣಪ್ಪ ಕರಡಿ, ಶರಣಪ್ಪ ಮುರಗಿ, ವಿನಾಯಕ ಗಂಧದ, ಅಪ್ಪಣ್ಣ ಜಿಡ್ಡಿ, ಗೀತಾ ಬಣಕಾರ, ರೋಹಿಣಿ ಕುಬಸದ, ನೇತ್ರಾ ಗದಗ ಉಪಸ್ಥಿತರಿದ್ದರು.

ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶೀನಾಥ ಬಿಳಿಮಗ್ಗದ ಸ್ವಾಗತಿಸಿದರು. ಲತಾ ಕಡ್ಡಿ ನಿರೂಪಿಸಿದರು.