---ಚೆನ್ನಾಗಿ ಪ್ರಕಟಿಸಿ-----
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ಕೈಗಾರಿಕೆಗಳಿಲ್ಲದ ಕಾರಣಕ್ಕೆ ಯುವಕರು ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ಹೋಗಬೇಕಾದ ಪರಿಸ್ಥಿತಿ ಇದ್ದು, ಈ ಸಮಸ್ಯೆ ಪರಿಹಾರಕ್ಕೆ ತಾಲೂಕು ಮಟ್ಟದಲ್ಲಿ ಕೈಗಾರಿಕೆ ನಿರ್ಮಾಣಕ್ಕೆ ಪ್ರಯತ್ನಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ ಭರವಸೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯನ್ನೇ ಹೊಂದಿಲ್ಲ. ಜಿಲ್ಲೆ ಮಟ್ಟಿಗೆ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತೆ ಕೇವಲ ಒಂದೇ ಕೈಗಾರಿಕಾ ವಸಾಹತು ಇದೆ. ಆದರೆ, ಅಲ್ಲಿ ಕೈಗಾರಿಕೆಗಳು ಇಲ್ಲ. ಹೀಗಾಗಿ ಜಿಲ್ಲೆಯ ಯುವ ಜನತೆ ಕೆಲಸಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯ ಪ್ರತಿ ತಾಲೂಕುಗಳಲ್ಲೂ ಕೈಗಾರಿಕೆಗಳು ತಲೆ ಎತ್ತುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಸಂಬಂಧ ಎಸ್ಐಟಿ ರಚಿಸಲಾಗಿದೆ. ಇದರಿಂದ ಮಲೆನಾಡಿನ ಮೂಲ ನಿವಾಸಿಗಳಿಗೆ ತಮ್ಮ ಭೂಮಿ ಯಾವುದು ಎನ್ನುವ ಆತಂಕ ಎದುರಾಗಿದೆ. ಮಲೆನಾಡಿನಲ್ಲಿ ಜನರಿಗೆ ಜಮೀನು ಇಲ್ಲ. ಕೆಲಸ ಮಾಡೋಣ ಎಂದರೆ ಕೈಗಾರಿಕೆಗಳೂ ಇಲ್ಲದ ಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆನ್ಲೈನ್ ಹಾರಾಜು ಸಮಸ್ಯೆ ಪರಿಹಾರ
ಸರ್ಫೆಸಿ ಕಾಯ್ದೆ ಅಡಿ ಕಾಫಿ ತೋಟಗಳನ್ನು ಆನ್ಲೈನ್ ಮೂಲಕ ಹರಾಜು ಹಾಕುತ್ತಿದ್ದರಿಂದ ಬೆಳೆಗಾರರಿಗೆ ಸಮಸ್ಯೆ ಯಾಗುತ್ತಿತ್ತು. ಇದನ್ನು ಮನಗಂಡ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಹಾಗೂ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಂಡ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ವಿವರಿಸಿದ್ದರಿಂದ ಸಚಿವರು ಆನ್ಲೈನ್ ಮೂಲಕ ಕಾಫಿ ತೋಟ ಹರಾಜಿಗೆ ತಡೆ ನೀಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ರಾಜ್ಯದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಯಾವ ಯಾವ ಕಾರ್ಖಾನೆ ಸಮಸ್ಯೆಯಲ್ಲಿವೆಯೋ ಗಮನಿಸಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.ಆನೆ ದಾಳಿ ಸಂತ್ರಸ್ತರಿಗೆ ₹50 ಲಕ್ಷ ಪರಿಹಾರಕ್ಕೆ ಆಗ್ರಹ
ಮಲೆನಾಡು ಭಾಗದಲ್ಲಿ ಆನೆಗಳ ದಾಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಹಿಂದೆ ಅರಣ್ಯ ಪ್ರದೇಶದಲ್ಲಿದ್ದ ಆನೆಗಳು ಇದೀಗ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಿಗೆ ಬರುತ್ತಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಕಾಡಾನೆ ದಾಳಿಯಿಂದ ಜೀವಹಾನಿಯೂ ಹೆಚ್ಚುತ್ತಿದೆ. ಕಾಡಾನೆ ದಾಳಿಯಿಂದ ಮೃತಪಟ್ಟವರಿಗೆ ಸರ್ಕಾರ ನೀಡುವ ಪರಿಹಾರವನ್ನು ₹20 ಲಕ್ಷ ದಿಂದ ₹50 ಲಕ್ಷ ಕೋಟಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಮಲೆನಾಡಿನಲ್ಲಿರುವ ಕಾರ್ಮಿಕರ ಸಮಸ್ಯೆಯಿಂದ ಉತ್ತರ ಕರ್ನಾಟಕ ಅಥವಾ ಅಸ್ಸಾಂ ಭಾಗದಿಂದ ಕಾರ್ಮಿಕರು ಬರುತ್ತಾರೆ. ಹೀಗೆ ಬರುವ ಕಾರ್ಮಿಕರು ಕಾಡಾನೆ ದಾಳಿಗೆ ಬಲಿಯಾದಲ್ಲಿ ಸರ್ಕಾರ ಆ ಕಾರ್ಮಿಕರ ಕುಟುಂಬದವರಿಗೆ ಪರಿಹಾರ ನೀಡಿದೆಯೇ? ಇಲ್ಲವೇ ಎಂಬುದು ತಿಳಿಯುವುದಿಲ್ಲ? ಹೀಗಾಗಿ ಕಾಡಾನೆ ದಾಳಿಯಿಂದ ಯಾರೇ ಮೃತಪಟ್ಟರೂ ಅವರ ಕುಟುಂಬಕ್ಕೆ ಅಂದೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.