ಜೊಂಪನಹಳ್ಳಿ ಜೈವಿಕ ಅನಿಲ ಮಾದರಿ ಗ್ರಾಮವನ್ನಾಗಿಸಲು ಪಣ: ಸಿ.ಕೆ.ವೆಂಕಟರಮಣ್

| Published : Nov 30 2024, 12:47 AM IST

ಜೊಂಪನಹಳ್ಳಿ ಜೈವಿಕ ಅನಿಲ ಮಾದರಿ ಗ್ರಾಮವನ್ನಾಗಿಸಲು ಪಣ: ಸಿ.ಕೆ.ವೆಂಕಟರಮಣ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಜನಸಮೂಹದ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಟೈಟಾನ್‌ ಕಂಪನಿ ಮತ್ತು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಗಡಿಪ್ರದೇಶವಾದ ಎಚ್.ಡಿ. ಕೋಟೆ ಮತ್ತು ಸರಗೂರು ಭಾಗದಲ್ಲಿ ಹಮ್ಮಿಕೊಂಡಿರುವ ವಿಶೇಷ ಯೋಜನೆಗಳನ್ನು ಟೈಟಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಮಣ್‌ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಾಮೀಣ ಪ್ರದೇಶದ ಜನಸಮೂಹದ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಟೈಟಾನ್‌ ಕಂಪನಿ ಮತ್ತು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಗಡಿಪ್ರದೇಶವಾದ ಎಚ್.ಡಿ. ಕೋಟೆ ಮತ್ತು ಸರಗೂರು ಭಾಗದಲ್ಲಿ ಹಮ್ಮಿಕೊಂಡಿರುವ ವಿಶೇಷ ಯೋಜನೆಗಳನ್ನು ಟೈಟಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಮಣ್‌ ವೀಕ್ಷಿಸಿದರು.

ಮೊದಲಿಗೆ ಎಚ್‌.ಡಿ.ಕೋಟೆ ತಾಲೂಕು ಜೊಂಪನಹಳ್ಳಿಗೆ ಭೇಟಿ ನೀಡಿದ ಅವರು ಗ್ರಾಮದಲ್ಲಿ ಕೈಗೊಂಡಿರುವ ಜೈವಿಕ ಅನಿಲ ಘಟಕಗಳನ್ನು ಪರಿಶೀಲಿಸಿದರು. ಗ್ರಾಮದಲ್ಲಿ 146 ಮನೆಗಳಿಗೆ ಜೈವಿಕ ಅನಿಲ ಘಟಕ ಸ್ಥಾಪನೆಗೆ ಟೈಟಾನ್‌ ಕಂಪನಿ ನೆರವಾಗಿದೆ. ಒಟ್ಟು ಗ್ರಾಮದಲ್ಲಿ 200 ಗ್ರಾಮಗಳಿಗೆ ವಿಸ್ತರಿಸಿ ಒಟ್ಟಾರೆ ಗ್ರಾಮವನ್ನು ಜೈವಿಕ ಅನಿಲ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.

ಇದಕ್ಕೆ ಅಗತ್ಯವಿರುವ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ. ಜೈವಿಕ ಅನಿಲ ಬಳಕೆಯಿಂದ ಸಗಣಿಯನ್ನು ಸರಿಯಾದ ರೀತಿಯಲ್ಲಿ ಬಳಸಬಹುದು. ಚಿಕ್ಕ ಸ್ಥಳವನ್ನು ಬಳಸಿಕೊಂಡು ಅನಿಲ ತಯಾರಿಸಿ ಯಾವುದೇ ಅಡ್ಡ ಪರಿಣಾಮ ಅಥವಾ ಭೀತಿ ಇಲ್ಲದೆ ಈ ಅನಿಲ ಬಳಸಬಹುದು ಎಂದರು.

ಯಾರ ಮನೆಯಲ್ಲಿ ಸ್ಥಳಾವಕಾಶ ಇಲ್ಲವೋ ಅಂತಹ ನಾಲ್ಕೈದು ಮನೆಗಳನ್ನು ಸೇರಿಸಿ ಒಂದು ಜೈವಿಕ ಅನಿಲ ಘಟಕ ಸ್ಥಾಪಿಸಿ ವಿತರಿಸಲು ಕೂಡ ನಾವು ಸಿದ್ಧರಿದ್ದೇವೆ. ಈ ಸಂಬಂಧ ಗ್ರಾಮಸ್ಥರೊಡನೆ ಕೂಡ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.

ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಸೇರಿ ಸಿ.ಕೆ. ವೆಂಕಟರಮಣ್‌ ಅವರಿಗೆ ಮೈಸೂರು ಪೇಟ, ಹಾರ, ಫಲ ತಾಂಬೂಲ ನೀಡಿ ಜೈವಿಕ ಅನಿಲ ಘಟಕ ಉದ್ಘಾಟನೆಯ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಜೊಂಪನಹಳ್ಳಿಯ ಹಲವು ಮಂದಿ ಮಹಿಳೆಯರು ತಮಗೆ ಸಿರಿಧಾನ್ಯಗಳ ಮೂಲಕ ವಿವಿಧ ಉತ್ಪನ್ನ ತಯಾರಿಸಲು ಅಗತ್ಯವಿರುವ ತರಬೇತಿ ನೀಡಿದರೆ ತಾವೂ ಕೂಡ ಒಂದು ಉತ್ಪಾದನಾ ಘಟಕ ತೆರೆಯುವುದಾಗಿ ಇಂಗಿತ ವ್ಯಕ್ತಪಡಿಸಿದರು. ಈ ಬಗ್ಗೆ ವೆಂಕಟರಮಣ್‌ ಮತ್ತು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಸಿಇಒ ಎಸ್‌. ಸವಿತಾ ಅವರು, ತಮ್ಮಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.

ಸಮೀಪದ ಕೆಂಚನಹಳ್ಳಿ ಹಾಡಿಯ ಗಿರಿಜನ ಮಹಿಳೆಯರು ತಯಾರಿಸಿದ ಸಿರಿಧಾನ್ಯದ ಲಡ್ಡುವನ್ನು ವೆಂಕಟರಮಣ್‌ ಅವರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕೆಲವು ಮನೆಗಳಿಗೆ ಭೇಟಿ ನೀಡಿ ಜೈವಿಕ ಅನಿಲದ ಬಳಕೆಯನ್ನು ವೀಕ್ಷಿಸಿದರು. ಸಾಮಾನ್ಯ ಎಲ್‌.ಪಿ.ಜಿ ಸ್ಟೌವ್‌ ಗಿಂತಲೂ ಹೆಚ್ಚು ಉರಿ ಬರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಪಂ ಸದಸ್ಯ ಯೋಗಾನಂದ ಸೇರಿದಂತೆ ವಿವಿಧ ಮಹಿಳಾ ಸಂಘದ ಪ್ರತಿನಿಧಿಗಳು ಹಾಗೂ ಮುಖಂಡರು ಇದ್ದರು.

ಮೆರವಣಿಗೆ ವೀಕ್ಷಿಸಿದ ವೆಂಕಟರಮಣ್

ಜೊಂಪನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಗೃಹಪ್ರವೇಶದ ದೇವತಾ ಕಾರ್ಯದ ಮೆರವಣಿಗೆಯನ್ನು ವೆಂಕಟರಮಣ್‌ ಕುತೂಹಲದಿಂದ ವೀಕ್ಷಿಸಿದರು. ವೀರಗಾಸೆ, ನಡಮುಡಿ ಹಾಸುವ ಪದ್ಧತಿ, ದೇವರ ತರುವ ರೀತಿ, ಮಂಗಳವಾದ್ಯದ ಸದ್ದು ಮುಂತಾದವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದ ಬಳಿಕ ಗ್ರಾಮಸ್ಥರೊಡನೆ ಮಾತುಕತೆ ನಡೆಸಿದರು.