ಕಾಡಾನೆ ದಾಳಿ ತಡೆಯಲು ಪ್ರಯತ್ನ: ಸಚಿವ ಖಂಡ್ರೆ

| Published : Jul 29 2025, 01:00 AM IST

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು ಪ್ರಕರಣ ಬಹಳ ನೋವಿನ ಸಂಗತಿ. ಪ್ರತಿಯೊಂದು ಜೀವ ಅತ್ಯಮೂಲ್ಯವಾದದ್ದು. ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ನನಗೆ ಬಹಳ‌ ನೋವಾಗಿದೆ, ನನ್ನ ಗಮನಕ್ಕೆ ಬಂದಿದೆ. ಇವತ್ತು ಬೆಳಿಗ್ಗೆ ಝೂಮ್ ಮೀಟಿಂಗ್ ಮಾಡಿದ್ದೇನೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು ಪ್ರಕರಣ ಬಹಳ ನೋವಿನ ಸಂಗತಿ. ಪ್ರತಿಯೊಂದು ಜೀವ ಅತ್ಯಮೂಲ್ಯವಾದದ್ದು. ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ನನಗೆ ಬಹಳ‌ ನೋವಾಗಿದೆ, ನನ್ನ ಗಮನಕ್ಕೆ ಬಂದಿದೆ. ಇವತ್ತು ಬೆಳಿಗ್ಗೆ ಝೂಮ್ ಮೀಟಿಂಗ್ ಮಾಡಿದ್ದೇನೆ, ಎಲ್ಲ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದೇನೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪರವಾಗಿ ಮೃತ ಪರಿವಾರಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಆ ಕುಟುಂಬದ ನೋವಿನಲ್ಲಿ ನಾವೆಲ್ಲಾ ಭಾಗಿಯಾಗಿದ್ದೇವೆ, ಬೆಂಗಳೂರಿಗೆ ಹೋದ ಮೇಲೆ, ಚಿಕ್ಕಮಗಳೂರಿಗೆ ಭೇಟಿ ಕೊಡುತ್ತೇನೆ ಎಂದರು.

ಮಾನವ-ಪ್ರಾಣಿ ಸಂಘರ್ಷ ತಡೆಯುವುದಕ್ಕೆ ಬಹಳಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ರೈಲ್ವೆ ಬ್ಯಾರಿಕೇಡ್, ಕಂದಕ, ಟೆಂಡೆಕಲ್ ಫಿನಿಶಿಂಗ್ ಮಾಡುತ್ತಿದ್ದೇವೆ, ಆನೆಗಳು ಹೊರಗಡೆ ಬಾರದಂತೆ ಅದಕ್ಕೆ ಬೇಕಾಗುವ ಆಹಾರ, ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ರಕ್ಷಣೆ ಕೊಡುತ್ತಿದ್ದೇವೆ. ಆನೆಗಳ ಸಂಖ್ಯೆ ಜಾಸ್ತಿ ಆಗಿದೆಯೇ ಹೊರತ, ವ್ಯಾಪ್ತಿ ಪ್ರದೇಶ ಹೆಚ್ಚಿನದ್ದಾಗಿಲ್ಲ. ಇದು ಆನೆಗಳ ಕಾರಿಡಾರ್ ಗೆ ಸ್ವಲ್ಪ ಪರಿಣಾಮ ಬೀರಿದೆ, ಇವೆಲ್ಲ ಕಾರಣಗಳಿಂದ ಇವತ್ತು ಮಾನವ-ಪ್ರಾಣಿ ಸಂಘರ್ಷ ಹೆಚ್ಚಿಗೆ ಆಗುತ್ತಿದೆ, ಈ‌ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ, ಇನ್ನೂ ಹೆಚ್ಚಿನ ಕ್ರಮ ಮಾಡುತ್ತೇವೆ ಎಂದು ಸಚಿವ ಖಂಡ್ರೆ ತಿಳಿಸಿದರು.

ಆನೆಗಳ ಚಲನವಲನ ಗಮನಕ್ಕೆ ರೇಡಿಯೋ ಕಾಲರ್‌:

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೇಡಿಯೋ ಕಾಲರ್ ಹಾಕಿ ಆನೆಗಳ ಚಲನವಲನ ಬಗ್ಗೆ ಗಮನವಿಟ್ಟು, ಎಲಿಫೆಂಟ್ ಟಾಸ್ಕ್‌ಫೋರ್ಸ್ ಮಾಡಿದ್ದೇವೆ. ಆ್ಯಂಟಿ ಪೌಚಿಂಗ್ ಕ್ಯಾಂಪ್, ಆ್ಯಂಟಿ ಡಿಪಟೇಶನ್ ಕ್ಯಾಂಪ್, ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಇದೆ. ಎಲ್ಲರೂ ಫ್ರಂಟ್‌ ಲೈನ್ ಸ್ಟಾಫ್‌ ಇದ್ದಾರೆ, ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ, ಕಾಡಾನೆ ದಾಳಿ ತಡೆಯೋದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.