ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಸಂಜೀವಿನಿ ಒಕ್ಕೂಟಗಳ ಬಲವರ್ಧನೆಗೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮೌನೇಶ ವಿಶ್ವಕರ್ಮ ಹೇಳಿದ್ದಾರೆ.ಸಿದ್ದಾಪುರ ಗ್ರಾಮ ಪಂಚಾಯತ್ ಮಟ್ಟದ ಮಾದರಿ ಸಂಜೀವಿನಿ ಒಕ್ಕೂಟದ ದೂರದೃಷ್ಟಿ ಯೋಜನೆಯ ಮೂರನೇ ಹಂತದ ತರಬೇತಿಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಒಕ್ಕೂಟಗಳು, ವಾರ್ಡ್ ಮಟ್ಟ ಹಾಗೂ ಸ್ವಸಹಾಯ ಗುಂಪುಗಳ ಮುಖೇನ ಸದಸ್ಯರ ಸಬಲೀಕರಣಕ್ಕೆ ಶ್ರಮಿಸಬೇಕು. ಆ ಮೂಲಕ ಸಮಾಜದ ಎಲ್ಲ ವರ್ಗದವರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ನಡೆಯಬೇಕಿದೆ ಎಂದರು.ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕಿ ಚಾಂದಿನಿ ಅವರು ಮಾತನಾಡಿ, ಒಕ್ಕೂಟಗಳನ್ನು ಹೆಚ್ಚು ಕ್ರಿಯಾಶೀಲ ಗೊಳಿಸಬೇಕು ಎನ್ನುವ ಕಾರಣಕ್ಕೆ ದೂರದೃಷ್ಟಿ ಯೋಜನೆ ತರಬೇತಿ ಸೇರಿದಂತೆ, ವಿವಿಧ ಇಲಾಖೆಗಳ ಮುಖೇನ ಸದಸ್ಯರುಗಳಿಗೆ ಮಾಹಿತಿ- ಜಾಗೃತಿ ನೀಡಲಾಗುತ್ತಿದೆ. ಒಕ್ಕೂಟ ಹಾಗೂ ಸ್ವಸಹಾಯ ಗುಂಪುಗಳ ಸಭೆಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರ ಮುಖೇನ ಸರ್ಕಾರ ನೀಡುವಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಸಂಜೀವಿನಿ ಒಕ್ಕೂಟಗಳಿಗೆ ಸರ್ಕಾರದಿಂದ ಸಿಗುವ ವಿವಿಧ ಯೋಜನೆ, ತರಬೇತಿಗಳ ಬಗ್ಗೆ ಅವರು ವಿವರಿಸಿದರು.ಸಿದ್ದಾಪುರ ಗ್ರಾ.ಪಂ.ಮಟ್ಟದ ಮಾದರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ತುಳಸಿ ಗಣಪತಿ ಅಧ್ಯಕ್ಷತೆ ವಹಿಸಿದ್ದರು.ವಲಯ ಮೇಲ್ವಿಚಾರಕಿ ಪ್ರಮೀಳಾ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ದೇವಯಾನಿ ಉಪಸ್ಥಿತರಿದ್ದರು.