ನಿವೃತ್ತ ಯೋಧರಿಗೆ ನಿರ್ದೇಶನಾಲಯದ ಮೂಲಕ ಸಹಾಯ ಮಾಡುವ ಕೆಲಸ ನಡೆಯುತ್ತಿದೆ. ನಿವೃತ್ತ ಯೋಧರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವ ಸಂಬಂಧ ಈ ಕುರಿತು ಪ್ರತ್ಯೇಕವಾಗಿ ನಿವೃತ್ತ ಸೇನಾನಿಗಳ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು.

ಕನ್ನಡಪ್ರಭ ವಾರ್ತೆ ತುಮಕೂರು

ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ಭೂಮಿ ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ನಗರದ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಎನ್‌ಸಿಸಿ- 4ರ ಬೆಟಾಲಿಯನ್‌ನಲ್ಲಿ ನಡೆದ ಸೇನಾ ದಿವಸ್, ಮಾಜಿ ಯೋಧನ ದಿವಸ್, ರಕ್ತದಾನ ಶಿಬಿರ ಹಾಗೂ ಸಂಕ್ರಾಂತಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಯೋಧರಿಗೆ ನಿರ್ದೇಶನಾಲಯದ ಮೂಲಕ ಸಹಾಯ ಮಾಡುವ ಕೆಲಸ ನಡೆಯುತ್ತಿದೆ. ನಿವೃತ್ತ ಯೋಧರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವ ಸಂಬಂಧ ಈ ಕುರಿತು ಪ್ರತ್ಯೇಕವಾಗಿ ನಿವೃತ್ತ ಸೇನಾನಿಗಳ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು.

ನಿವೃತ್ತ ಸೈನಿಕರು ಈ ಇಲಾಖೆ ನಿರ್ದೇಶನಾಲಯ ನಿಮ್ಮ ಜತೆಯಲ್ಲೇ ಇದೆ. ನಿವೃತ್ತರಾದ ಮೇಲೆ ಕೃಷಿ ಮಾಡುವವರಿಗೆ ಭೂಮಿ ಕೊಡಬೇಕು, ಬ್ಯುಸಿನೆಸ್ ಮಾಡುವವರಿಗೆ ಸಹಾಯ ಮಾಡಬೇಕು ಎಂದು ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ನಿರ್ದೇಶನಾಲಯ ಸ್ಥಾಪಿಸಲಾಗಿದೆ ಎಂದರು.

ಇಡೀ ಜಿಲ್ಲೆಯಲ್ಲಿ ಇರುವ ನಿವೃತ್ತ ಯೋಧರನ್ನು ಮತ್ತೊಂದು ಬಾರಿ ನಾನು ಭೇಟಿ ಮಾಡುತ್ತೇನೆ. ನಮ್ಮ ಜಿಲ್ಲೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಗೆಹರಿಸೋಣ ಎಂದು ಹೇಳಿದರು.

ನಾನೂ ಸಹ 5 ವರ್ಷಗಳ ಕಾಲ ಎನ್‌ಸಿಸಿಯಲ್ಲಿ ಇದ್ದೆ. ಇದು ಬಹಳ ಜನರಿಗೆ ಗೊತ್ತಿಲ್ಲ ಎಂದು ತಾವು ಎನ್‌ಸಿಸಿಯಲ್ಲಿದ್ದ ಅವಧಿಯ ನೆನಪುಗಳನ್ನು ಮೆಲುಕು ಹಾಕಿದರು.

ಉತ್ತರ ಭಾರತದ ಜನರಿಗಾಗಿ ಎನ್‌ಸಿಸಿ- 4ನೇ ಬೆಟಾಲಿಯನ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡುತ್ತಿರುವುದರ ಬಗ್ಗೆ ಗೊತ್ತಾಯಿತು. ಅವರಿಗೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ತಿಳಿಸುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ, ೪ನೇ ಕರ್ನಾಟಕ ಬೆಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಅವಿನಾಶ್, ಸುಬೇದಾರ್ ಮೇಜರ್ ದಿನೇಶ್ ಸಿಂಗ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬೊಮ್ಮಲಿಂಗಯ್ಯ, ವಿ.ಡಿ. ನಾಗರಾಜು, ಎನ್‌ಸಿಸಿ ಅಧಿಕಾರಿಗಳಾದ ಕ್ಯಾ. ರಾಮಲಿಂಗಾರೆಡ್ಡಿ, ಕ್ಯಾ. ಪ್ರದೀಪ್‌ಕುಮಾರ್, ಲೆಫ್ಟಿನೆಂಟ್ ಕವಿತಾ, ಲೆಫ್ಟಿನೆಂಟ್ ಶೃತಿ, ಲೆಫ್ಟಿನೆಂಟ್ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.