ಸಾರಾಂಶ
-ಸಂಭ್ರಮದ ಈದ್-ಮಿಲಾದ್ ಹಬ್ಬದ ಆಚರಣೆಯಲ್ಲಿ ಅಭಿಮತಕನ್ನಡಪ್ರಭ ವಾರ್ತೆ ಹೊಸಕೋಟೆ
ಹಿಂದೂ-ಮುಸ್ಲಿಂ ಯಾವುದೇ ಹಬ್ಬಗಳಲ್ಲಿ ಪ್ರತಿಯೊಬ್ಬರು ಧರ್ಮ, ಜಾತಿ ಬೇದಭಾವ ತೋರದೆ ಪರಸ್ಪರ ಭಾವೈಕ್ಯತೆ-ಸಾಮರಸ್ಯದಿಂದ ಹಬ್ಬ ಆಚರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಆಯೋಜಿಸಿದ್ದ ಈದ್-ಮಿಲಾದ್ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಸಾಕಷ್ಟು ಮಹತ್ವ ಪಡೆದಿರುವ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಈದ್-ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಅನೇಕ ಸಂತರು ಸಮಾಜದ ಬದಲಾವಣೆಗೆ ಅನುಸರಿಸಿದ ಭಕ್ತಿ ಮಾರ್ಗದ ರೀತಿ ಪೈಗಂಬರರು ಸಮಾಜದಲ್ಲಿ ಧರ್ಮ ಜಾಗೃತಿ ಜೊತೆಗೆ ಧರ್ಮ ಸಮಾನತೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ. ಆದ್ದರಿಂದ ಪ್ರತಿಯೊಬ್ಬರು ಅವರ ಮಾರ್ಗದರ್ಶನದಲ್ಲಿ ನಡೆದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೆ ಅವರ ಜಯಂತಿಗಳನ್ನು ಧರ್ಮಾತೀತವಾಗಿ ಆಚರಿಸಬೇಕು ಎಂದರು.
ಜಾಮಿಯಾ ಮಸೀದಿ ಸದಸ್ಯ ಸಯ್ಯದ್ ನವಾಜ್ ಮಾತನಾಡಿ, ಈದ್-ಮಿಲಾದ್ ಹಬ್ಬವನ್ನು ಹಲವಾರು ದಶಕಗಳಿಂದ ನಗರದಲ್ಲಿ ಸಾಕಷ್ಟು ಸಾಮರಸ್ಯದಿಂದ ಆಚರಣೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಪಂಗಡದವರು ಆಚರಣೆ ಮಾಡುವ ಹಬ್ಬ ಇದಾಗಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ಜೊತೆಗೆ ಪೈಗಂಬರರ ಹುಟ್ಟಿದ ದಿನ ಯಾರೊಬ್ಬರು ಉಪವಾಸ ಇರಬಾರದು ಎಂಬ ದೃಷ್ಟಿಯಿಂದ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡುತ್ತೇವೆ ಎಂದರು.ಈ ವೇಳೆ ಜಾಮಿಯಾ ಮಸೀದಿ ಅಧ್ಯಕ್ಷ ಮಜೂಂದಾರ್ ಪಾಷಾ, ಸದಸ್ಯ ಸಯ್ಯದ್ ನವಾಜ್, ವಕ್ತ್ ಮಾಜಿ ಅಧ್ಯಕ್ಷ ನಿಸಾರ್ ಅಹಮದ್, ಮುಖಂಡರಾದ ಸಗೀರ್ ಉಲ್ಲಾ, ಸಗೀರ್ ಅಹಮದ್, ಅಂಜು, ಸಿರಾಜ್, ಆಖಿಲ್ ಅಹಮದ್, ಅಬ್ದುಲ್ಲಾ ಸಾಬ್, ಗುಲ್ಷಾದ್, ಹಬೀಬುಲ್ಲಾ ರೆಹಮಾನ್, ಇರ್ಷಾದ್, ಖದೀರ್, ಬಿಎಂಆರ್ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜ್, ಉದ್ಯಮಿ ಭೈರೇಗೌಡ, ಸುಭಾಷ್ಗೌಡ, ಗೋಪಾಲ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.