ತಮ್ಮ ಅನುಮತಿ ಪಡೆಯದೆ ಮಕ್ಕಳು ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ವಸತಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ವಾರ್ಡನ್ 8 ಮಕ್ಕಳನ್ನು ಕೆಳ ಮಹಡಿಯ ಕೋಣೆಯಲ್ಲಿ ಉಪವಾಸವಿಟ್ಟು, ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತಮ್ಮ ಅನುಮತಿ ಪಡೆಯದೆ ಮಕ್ಕಳು ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ವಸತಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ವಾರ್ಡನ್ 8 ಮಕ್ಕಳನ್ನು ಕೆಳ ಮಹಡಿಯ ಕೋಣೆಯಲ್ಲಿ ಉಪವಾಸವಿಟ್ಟು, ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ನಡೆದಿದೆ.ಶಾಲೆಯ ಪ್ರಿನ್ಸಿಪಾಲ್ ಸತೀಶ್ ಹಾಗೂ ವಾರ್ಡನ್ ಅಭಯ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ನೋವು ತಾಳಲಾರದೆ ವಿದ್ಯಾರ್ಥಿಗಳು ರಕ್ಷಣೆಗೆ ಕೂಗಲು ಪ್ರಾರಂಭಿಸಿದಾಗ ವಸತಿ ಶಾಲೆ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದಾಗ, ಅಂಡರ್ಗ್ರೌಂಡ್ ರೂಮಿನಲ್ಲಿ ವಿದ್ಯಾರ್ಥಿಗಳು ಇದ್ದುದು ದೃಢಪಟ್ಟಿದೆ. ತಕ್ಷಣವೇ ಪೊಲೀಸರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಚಾರ್ಯರು ಉತ್ತರ ಭಾರತ ಮೂಲದವರಾಗಿದ್ದು, ಮಕ್ಕಳು ಸ್ಥಳೀಯರು ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿ, ಕಾನೂನುಕ್ರಮಕ್ಕೆ ಆಗ್ರಹಿಸಿದರು.
ಶಾಲೆಯ ಪ್ರಾಚಾರ್ಯ ಸತೀಶ್, ಹಲ್ಲೆ ಮಾಡಿಲ್ಲ, ಸಿಲಿಂಡರ್ ತರಲು ಹೋದಾಗ ಮಕ್ಕಳೇ ಜಗಳವಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ ಎಂದು ಸಮಾಜಾಯಿಷಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.