ಚನ್ನಪಟ್ಟಣ: ಜಲಜೀವನ್ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆಂದು ವೃದ್ಧೆಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ದೌರ್ಜನ್ಯ ನಡೆಸಿರುವ ಅಮಾನವೀಯ ಘಟನೆ ತಾಲೂಕಿನ ಚಿಕ್ಕಮಳೂರು ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಲಲಿತಾ, ಸೌಭಾಗ್ಯ ಹಾಗೂ ಮಂಗಳ ವೃದ್ಧೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ವೃದ್ಧೆಯ ಮನೆ ಪಕ್ಕ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಅದಕ್ಕೆ ವೃದ್ಧೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ದೌರ್ಜನ್ಯ ನಡೆಸಲಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವೃದ್ಧೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿದ್ದು, ವೃದ್ಧೆ ನರಳಾಡುತ್ತಿದ್ದಾರೆ. ಗ್ರಾಮಸ್ಥರಾಗಲಿ ಆ ದಾರಿಯಲ್ಲಿ ಓಡಾಡಿದವರಾಗಲಿ ಯಾರೂ ಕ್ಯಾರೆ ಎಂದಿಲ್ಲ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪುರ ಪೊಲೀಸ್ ಠಾಣೆ ಪೊಲೀಸರು ವೃದ್ಧೆಯನ್ನು ಕಂಬದಿಂದ ಬಿಡಿಸಿ ನಗರದ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.