ಸದಸ್ಯರಿಗೆ ನೀಡುವ ಸಾಲದ ಮಿತಿಯನ್ನು ಈಗಿನ ₹6 ಲಕ್ಷರಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು,
ಕಂಪ್ಲಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗಾಗಿ ಡಿ.7ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ ಗುರುವಾರ ಜೆಸ್ಕಾಂ ಕಚೇರಿ ಆವರಣದಲ್ಲಿ ಚುನಾವಣಾ ಚಟುವಟಿಕೆ ಚುರುಕುಗೊಂಡಿದ್ದು, ಸುಕುಮಾರ್ ನೇತೃತ್ವದ ತಂಡದ ಅಭ್ಯರ್ಥಿಗಳು ವ್ಯಾಪಕ ಮತಯಾಚನೆ ನಡೆಸಿದರು.
ಕಿರಿಯ ಅಭಿಯಂತರ ಎಸ್. ತಿಪ್ಪೇಸ್ವಾಮಿ ಮಾತನಾಡಿ, ತಮ್ಮ ತಂಡದ 11 ಅಭ್ಯರ್ಥಿಗಳಿಗೆ ಮತದಾನ ಮಾಡಿ ಗೆಲ್ಲಿಸುವಂತೆ ನೌಕರರಿಗೆ ಮನವಿ ಮಾಡಿದರು. ಸಹಕಾರಿ ಸಂಘದ ಮೂಲಕ ಸದಸ್ಯರಿಗೆ ಇನ್ನಷ್ಟು ಫಲಾನುಭವ ಒದಗಿಸುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿರುವುದಾಗಿ ಹೇಳಿದರು.ಸದಸ್ಯರಿಗೆ ನೀಡುವ ಸಾಲದ ಮಿತಿಯನ್ನು ಈಗಿನ ₹6 ಲಕ್ಷರಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು, ನೌಕರರ ಸುರಕ್ಷತೆ ಗಮನಿಸಿ ಅಪಘಾತ ವಿಮೆ ಸೌಲಭ್ಯವನ್ನು ಹೆಚ್ಚುವರಿ ರೂಪದಲ್ಲಿ ನೀಡುವುದು, ಸೌಲಭ್ಯ ಕಚೇರಿಗಳನ್ನು ಸುಧಾರಿಸುವುದು, ವೇಗವಾದ ಸೇವಾ ವಿತರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ನಮ್ಮ ತಂಡ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಮತಯಾಚನೆಯಲ್ಲಿ ವಿ.ಗಂಗಾಧರ ನಾಯ್ಕ, ನಾಗರಾಜ ಜೊನ್ನದ, ಬಿ. ನಾರಪ್ಪ, ಎಚ್. ಬಸವರಾಜ, ಮಹಾಂತೇಶ ಈರಪ್ಪ ಕುಬುಸದ್, ಕೆ. ಯಲ್ಲಪ್ಪ, ರುದ್ರಪ್ಪ, ಕೆ.ಎಂ. ವೀರೇಶ್, ಸುಕುಮಾರ್, ಸಿ.ಪಿ. ರಾಜಣ್ಣ ಸೇರಿದಂತೆ ನಿರ್ದೇಶಕ ಅಭ್ಯರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ಡಿ. ಶ್ರೀನಿವಾಸ್, ಕಾರ್ಯದರ್ಶಿ ಎನ್. ಉಮೇಶ್ ಹಾಗೂ ಸದಸ್ಯರಾದ ಕೆ. ನಾಗರಾಜ, ಎನ್. ವೆಂಕಟಾಚಲಂ, ಬಿ. ಹೊನ್ನೂರಸ್ವಾಮಿ, ಕೆ. ದೊಡ್ಡಬಸಪ್ಪ, ರಾಜಣ್ಣ, ಬಿ. ಬಸಪ್ಪ ಇದ್ದರು.