ಮತದಾನ ಜಾಗೃತಿ, ಜಲ ಸಂರಕ್ಷಣೆಗಾಗಿ ಬೈಕ್ ಜಾಥಾಗೆ ಚಾಲನೆ

| Published : Apr 20 2024, 01:03 AM IST

ಸಾರಾಂಶ

ಇದೇ ಏ.26 ರಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲ ಯುವಕ-ಯುವತಿಯರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದಕ್ಕೂ ಪ್ರಭಾವಿತರಾಗದೇ ಸಂವಿಧಾನ ನೀಡಿರುವ ಮತ ಚಲಾಯಿಸಬೇಕು. ಇತ್ತೀಚಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗುತ್ತಿದೆ. ಸರಿಯಾಗಿ ಮಳೆಯಾಗದೆ ಯಾವುದೇ ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಅಂರ್ತಜಲ ಕುಸಿಯುತ್ತಿದೆ. ಪ್ರತಿಯೊಬ್ಬರು ನೀರಿನ ಮಿತವಾಗಿ ಬಳಕೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮತದಾನ ಜಾಗೃತಿ ಹಾಗೂ ಜಲ ಸಂರಕ್ಷಣೆ ಅರಿವು ಅಂಗವಾಗಿ ತಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸುವ ಬೈಕ್ ಜಾಥಾಕ್ಕೆ ತಾಪಂ ಇಒ ಲೋಕೇಶ್‌ ಮೂರ್ತಿ ಮತ್ತು ಜಿಪಂ ಮುಖ್ಯಯೋಜಾನಾಧಿಕಾರಿ ಧನುಷ್ ಚಾಲನೆ ನೀಡಿದರು.

ಪಟ್ಟಣದ ತಾಪಂ ಕಚೇರಿಯ ಆವರಣದಿಂದ ಹೊರಟ ಬೈಕ್‌ ಜಾಗೃತಿ ಜಾಥಾವು ತಾಲೂಕಿನ ಕೆನ್ನಾಳು, ಕ್ಯಾತನಹಳ್ಳಿ, ಹರವು, ಎಲೆಕೆರೆಹ್ಯಾಂಡ್‌ಪೋಸ್ಟ್, ಕೆ.ಬೆಟ್ಟಹಳ್ಳಿ, ಶಂಭೂನಹಳಿ ಮಾರ್ಗವಾಗಿ ಚಲಿಸಿ ಪಾಂಡವಪುರ ಪಟ್ಟಣಕ್ಕೆ ತಲುಪಿತು. ಪಟ್ಟಣದಲ್ಲಿ ಶಾಂತಿನಗರ, ವಿಜಯಕಾಲೇಜು, ಪೊಲೀಸ್ ಸ್ಟೇಷನ್ ರಸ್ತೆ, ಹಿರೇಮರಳಿ ಆಟೋ ಸರ್ಕಲ್, ಚರ್ಚ್‌ ರಸ್ತೆ, ಮಂಡ್ಯ ಸರ್ಕಲ್, ಐದುದೀಪದ ವೃತ್ತದ ಮೂಲಕ ತಾಪಂ ಆವರಣ ತಲುಪಿದರು. ತಾಪಂ ಆವರಣದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

ಜಿಪಂ ಯೋಜನಾಧಿಕಾರಿ ಮಾತನಾಡಿ, ಮತದಾನ ಪ್ರತಿ ವ್ಯಕ್ತಿಗೆ ನಮ್ಮ ಸಂವಿಧಾನ ನೀಡಿರುವ ಅಮೂಲ್ಯವಾದ ಹಕ್ಕು. ಅದನ್ನು ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಬೇಕೆಂದರು.

ಇತ್ತೀಚಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗುತ್ತಿದೆ. ಸರಿಯಾಗಿ ಮಳೆಯಾಗದೆ ಯಾವುದೇ ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಅಂರ್ತಜಲ ಕುಸಿಯುತ್ತಿದೆ. ಪ್ರತಿಯೊಬ್ಬರು ನೀರಿನ ಮಿತವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಇದೇ ಏ.26 ರಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲ ಯುವಕ-ಯುವತಿಯರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದಕ್ಕೂ ಪ್ರಭಾವಿತರಾಗದೇ ಸಂವಿಧಾನ ನೀಡಿರುವ ಮತ ಚಲಾಯಿಸಬೇಕು ಎಂದರು.

ಈ ವೇಳೆ ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಎಇಇ ಮಹದೇವಸ್ವಾಮಿ, ಸಹಾಯಕ ನಿರ್ದೇಶಕ ಬಸವರಾಜು, ಗ್ರಾಪಂ ಪಿಡಿಒಗಳು, ಕಾರ್‍ಯದರ್ಶಿ ಹಾಗೂ ಸಿಬ್ಬಂದಿ, ತಾಪಂ ಸಿಬ್ಬಂದಿ, ಸಂಜೀವಿನ ಒಕ್ಕೂಟ ಹಾಗೂ ತಾಲೂಕು ಸಿಬ್ಬಂದಿ ಮತ್ತು ವಿಕಲಚೇತನರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.