ಸಾರಾಂಶ
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪನೆಯಾದ 48 ವರ್ಷಗಳಲ್ಲಿ ಈಗ ಎರಡನೇಯ ಬಾರಿಗೆ ಚುನಾವಣೆಯು ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.ಸಹಕಾರ ಸಂಘ ಸ್ಥಾಪನೆಯಾಗಿ 48 ವರ್ಷಗಳು ಗತಿಸಿದ್ದು, 2015ನೇ ಸಾಲಿನಲ್ಲಿ ಒಂದು ಬಾರಿ ಚುನಾವಣೆ ನಡೆಸಲಾಗಿತ್ತು. ಮತ್ತೆ 10 ವರ್ಷಗಳ ನಂತರ ಈ ವರ್ಷ ಚುನಾವಣೆ ನಡೆಸಲು ಸಜ್ಜಾಗಿದ್ದು ಒಟ್ಟು 12 ಜನ ನಿರ್ದೇಶಕರ ಪೈಕಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 9 ನಿರ್ದೇಶಕರ ಆಯ್ಕೆಗೆ 21 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಡಿ. 29ರಂದು ದೋಟಿಹಾಳ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದೆ.ಸಾಲಗಾರರ ಕ್ಷೇತ್ರದ 5 ಸಾಮಾನ್ಯ ಸ್ಥಾನಗಳ ಪೈಕಿ 11 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು, ಹಿಂದುಳಿದ ವರ್ಗ ಅ ಮೀಸಲು 1 ಸ್ಥಾನಕ್ಕೆ 3 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ 2 ಜನ ಅಭ್ಯರ್ಥಿಗಳು, ಸಾಲಗಾರರಲ್ಲದ ಕ್ಷೇತ್ರದ 1 ಸಾಮಾನ್ಯ ಸ್ಥಾನಕ್ಕೆ 3 ಅಭ್ಯರ್ಥಿಗಳು ಒಟ್ಟು 21 ಜನ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸಿದ್ದಾರೆ.
ಅವಿರೋಧ ಆಯ್ಕೆಸಾಲಗಾರರ ಕ್ಷೇತ್ರ ಹಿಂದುಳಿದ ಬ ವರ್ಗಕ್ಕೆ ಶರಣಪ್ಪ ಗೋತಗಿ, ಮಹಿಳಾ ಮೀಸಲು ಸ್ಥಾನಗಳಿಗೆ ಯಲ್ಲವ್ವ ಸರೂರು, ಮಾಬೂಬಿ ಕಲಾಲಬಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಮತದಾರರು:ಸಾಲಗಾರರ ಕ್ಷೇತ್ರದ ಒಟ್ಟು ಮತದಾರರು 535 ಜನರಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದ ಒಟ್ಟು ಮತದಾರರು 196 ಜನರಿದ್ದಾರೆ.
ತೆರೆಮರೆಯ ಕಸರತ್ತುಕೆಲ ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಪೋನ್ ಕರೆ ಮಾಡುವ ಮೂಲಕ, ಮನೆಗೆ ಭೇಟಿ ನೀಡಿ ಮತ ಹಾಕುವಂತೆ ಮನವೊಲಿಸುತ್ತಿದ್ದಾರೆ. ಚುನಾವಣೆಯ ಹಿಂದಿನ ದಿನ ಹಣ ಹಂಚುವುದು, ಬಾಡೂಟ ಮಾಡಿಸುವುದು, ಆಶ್ವಾಸನೆಗಳನ್ನು ನೀಡುವುದು ಸೇರಿದಂತೆ ಗೆದ್ದು ಬರಲು ಏನೆಲ್ಲಾ ಕಸರತ್ತುಗಳನ್ನು ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಊಹಿಸಬಹುದಾಗಿದೆ.
ದೋಟಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಇಷ್ಟು ವರ್ಷ ರಾಜಕೀಯವಿರಲಿಲ್ಲ. ಈಗ ಪ್ರವೇಶ ಮಾಡಿದ್ದು, ಚುನಾವಣೆ ರಂಗಿನಿಂದ ನಡೆಯುತ್ತಿದೆ. ಏನಾಗುತ್ತದೆ ಎಂದು ಕಾಯ್ದು ನೋಡಬೇಕಿದೆ ಎನ್ನುತ್ತಾರೆ ದೋಟಿಹಾಳದ ಪ್ರಜ್ಞಾವಂತ ನಾಗರಿಕರು.ಮನವೊಲಿಕೆನನಗೆ ದೂರವಾಣಿ ಕರೆ ಮಾಡಿ ಮತ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳ ಮೂಲಕವೂ ಮನವೊಲಿಸಲಾಗುತ್ತಿದೆ. ರೈತರ ಪರವಾಗಿ ಕೆಲಸ ಮಾಡುವಂತಹ ಉತ್ತಮ ಅಭ್ಯರ್ಥಿ ಮತ ಚಲಾಯಿಸುವೆ.
- ಶ್ರೀನಿವಾಸ ಕಂಟ್ಲಿ, ದೋಟಿಹಾಳ ಗ್ರಾಮದ ಮತದಾರ.