ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಮತ್ತೆ ಒಂಟಿ ಸಲಗದ ಹಾವಳಿಯು ಹೆಚ್ಚಿದೆ.ಕಳೆದ ಒಂದು ವಾರ ವ್ಯಾಪ್ತಿಯಲ್ಲಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿ ಮನೆಯವರ ಹಲಸು ಹಾಗೂ ಅಡಕೆ ಮರ ದೂಡಿ ಹಾಕಿದ್ದು ಹಾಗೂ ಗದ್ದೆಯಲ್ಲಿ ಬತ್ತ ಬಿತ್ತನೆ ಮಾಡಿದ ಗದ್ದೆಯನ್ನು ಮೆಟ್ಟಿಕೊಂಡು ಹೋಗಿದ್ದು ಕೃಷಿಯನ್ನು ಹಾನಿಗೊಳಿಸಿದೆ. ಬೊಬ್ಬರ್ ಬೆಟ್ಟು ಸುಬ್ರಯಾ ಆಚಾರ್ಯ ಎಂಬವರ ಕೃಷಿಗೆ ಹಾಕಿರುವ, ಪೈಪ್ ಲೈನ್ ಹುಡಿಮಾಡಿದ್ದು ಹತ್ತಿರದಲ್ಲೇ ಇದ್ದ ಹಲಸಿನ ಮರದ ಗೆಲ್ಲುಗಳನ್ನು ತುಂಡರಿಸಿದೆ. ಹಲಸಿನ ಮರವೇ ಟಾರ್ಗೆಟ್: ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಿಂದ ಕೇವಲ ಹಲಸಿನ ಮರದ ಎಲೆಗಳು, ಹಲಸು ತಿಂದು ಸಾಗುತ್ತಿದೆ. ಇಲ್ಲದಿದ್ದರೆ ನೆಟ್ಟ ಅಡಕೆ ಮರವನ್ನು ಸೀಳಿ ತಿರುಳನ್ನು ತಿನ್ನುತ್ತಿವೆ. ಸೋಮೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಬೈನೆ ಮರಗಳು ತೀರಾ ಕಡಿಮೆ ಇದ್ದು ಹಲಸು ಹಾಗೂ ಅಡಕೆ ಮರವನ್ನು ತಿನ್ನುತ್ತವೆ. ಲೈಟ್ ಹಾಕಿದಾಗ ಓಟಕ್ಕಿತ್ತ ಆನೆ .: ರಾತ್ರಿ ವೇಳೆಯಲ್ಲಿ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿ ಮನೆಯ ಹಲಸಿನ ಮರದ ಗೆಲ್ಲು ತುಂಡರಿಸುವ ವೇಳೆ ಶಬ್ದ ಬಂದ ವೇಳೆಯಲ್ಲಿ ಲೈಟ್ ಹಾಕಿದಾಗ ಆನೆ ಓಟಕ್ಕಿತ್ತಿದೆ. ಕಳೆದ ಹದಿನೈದು ದಿನಗಳ ಹಿಂದೆ ಮೀನಾ ಪೂಜಾರ್ತಿ ಎಂಬವರ ಮನೆ ಬಳಿ ಆನೆ ರಾತ್ರಿ ವೇಳೆಯಲ್ಲಿ ದಾಳಿಮಾಡುತ್ತಿದ್ದು ಮರದಲ್ಲಿದ್ದ ಹಲಸು ಹಾಗೂ ತೆಂಗು, ಬಾಳೆ, ನಾಶ ಮಾಡಿತ್ತು. ಜೊತೆಗೆ ಗ್ರಾಮಸ್ಥರು ಮೀನಾ ಪೂಜಾರ್ತಿ ಅವರ ಮನೆ ಯಲ್ಲಿ ಆನೆ ಓಡಿಸಬೇಕು ಎಂದು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೆಬ್ರಿ ತಾಲೂಕಿನಲ್ಲಿ ತಾಲೂಕು ಕಚೇರಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಕಾಡಾನೆ ಹಾವಳಿ ಬಗ್ಗೆ ಪ್ರಸ್ತಾಪವಾಗಿತ್ತು. ಅರಣ್ಯ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತ ವಾಗಿದ್ದು ಆನೆಯನ್ನು ಕಾಡಿಗೆ ಓಡಿಸುವ ವ್ಯವಸ್ಥೆ ಚಾಲನೆ ನೀಡಿದೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಮೂವತ್ತು ವರ್ಷಗಳಿಂದ ಈ ಒಂಟಿ ಸಲಗವು ಸುಳ್ಯದ ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಳ್ತಂಗಡಿ ಮೂಲಕ ನಾರಾವಿ, ಮಾಳ ಘಾಟ್ ಮೂಲಕ ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ ತಿಂಗಳಮಕ್ಕಿ, ತೆಂಗುಮಾರ್, ಕಿಗ್ಗ, ಬರ್ಕಣ ಮಲ್ಲಂದೂರು, ಆಗುಂಬೆ ಯ ಮೂಲಕ ನಗರ ಹೊಸನಗರ ವರೆಗೆ ಸಂಚರಿಸುತ್ತದೆ. ಆದರೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ.