ಸಾರಾಂಶ
ಬೆಳ್ತಂಗಡಿಯಲ್ಲಿ ಒಂಟಿ ಸಲಗ ಸಂಚಾರ
ಬೆಳ್ತಂಗಡಿ: ತಾಲೂಕಿನ ನಾವೂರಿನಿಂದ ಹೊರಟ ಒಂಟಿ ಸಲಗ ಹಲವಾರು ಕಡೆಗಳಲ್ಲಿ ಸಾಗಿ ಬಂದು ಸುಮಾರು 15 ಕಿ.ಮೀ.ಗಿಂತ ಅಧಿಕ ದೂರ ಸಂಚರಿಸಿ ಚಾರ್ಮಾಡಿ-ಕನಪಾಡಿ ಅರಣ್ಯದತ್ತ ಸಂಚರಿಸಿದ ಬಗ್ಗೆ ವರದಿಯಾಗಿದೆ.ನ.10ರಂದು ಸಂಜೆ ನಾವೂರಿನಲ್ಲಿ ಕಂಡುಬಂದಿದ್ದ ಒಂಟಿ ಸಲಗ, ಇಂದಬೆಟ್ಟು- ಮೈಂದಡ್ಕ- ಬಲ್ಲಾಳಬೆಟ್ಟು-ಹೇಡ್ಯ- ಕಾನರ್ಪ ಮೊದಲಾದ ಕಡೆಗಳಲ್ಲಿ ಜನ ವಾಸ್ತವ್ಯ ಇರುವ ಹಾಗೂ ತೋಟಗಳ ಬದಿಯಿಂದ ಸಾಗಿ ಕಡಿರುದ್ಯಾವರದಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಚಾರ್ಮಾಡಿ-ಕನಪಾಡಿ ಅರಣ್ಯದ ಕಡೆ ಸಾಗಿರುವ ಕುರಿತು ಪರಿಸರದ ನಾಗರಿಕರು ತಿಳಿಸಿದ್ದಾರೆ.
ಒಂಟಿ ಸಲಗ ಕಡಿರುದ್ಯಾವರ ಗ್ರಾಮದ ಲಿಜೋ ಸ್ಕರಿಯ ಎಂಬವರ ತೋಟದಲ್ಲಿ ಒಂದು ತೆಂಗಿನ ಗಿಡಕ್ಕೆ ಸ್ವಲ್ಪ ಹಾನಿ ಉಂಟು ಮಾಡಿದೆ. ಅಲ್ಲದೆ ಪರಿಸರದಲ್ಲಿ ಒಂದೆರಡು ಬಾಳೆ ಗಿಡಗಳಿಗೆ ಹಾನಿ ಮಾಡಿರುವುದು ಬಿಟ್ಟರೆ ಹೆಚ್ಚಿನ ಹಾನಿ ಉಂಟುಮಾಡಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಈ ಒಂಟಿ ಸಲಗ ಇಲ್ಲಿನ ಪ್ರದೇಶಗಳಲ್ಲಿ ವರ್ಷಕ್ಕೆ ಒಂದು ಬಾರಿ ಸಂಚಾರ ನಡೆಸುವುದು ಕಂಡುಬರುತ್ತದೆ. ಆದರೆ ಹೆಚ್ಚಿನ ಹಾನಿಯನ್ನು ಉಂಟುಮಾಡುವುದಿಲ್ಲ. ಹೆಚ್ಚಿನ ಉಪಟಳ ನೀಡದೆ ಸಂಚರಿಸುವ ಎಡ ಬದಿಯ ಒಂದು ಕಿವಿ ಸ್ವಲ್ಪ ಹರಿದಿರುವ ಸಲಗದ ಸಂಚರಿಸುವ ಚಿತ್ರವನ್ನು ಶುಕ್ರವಾರ ನಾವೂರು ಪರಿಸರದ ಮಂದಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.