ಕನ್ನಡಪ್ರಭ ವಾರ್ತೆ ದಾವಣಗೆರೆ
ಬೋವಿ ಅಭಿವೃದ್ಧಿ ನಿಗಮದ ಸಹಾಯಧನವು ಅರ್ಹರಿಗೆ ಹಾಗೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಭೋವಿ ಸಮುದಾಯದವರ ಸ್ವಾವಲಂಬನೆ, ಉದ್ಯೋಗಾವಕಾಶ ಮತ್ತು ಕೃಷಿ ಆಧಾರಿತ ಅಭಿವೃದ್ಧಿಗೆ ನಿಗಮವು ಹೆಚ್ಚಿನ ಒತ್ತು ನೀಡಿದೆ. ಭೋವಿ, ಒಡ್ಡೆ, ಒಡ್ಡರ್, ವಡ್ಡರ್, ಕಲ್ಲು ಒಡ್ಡರ, ಮಣ್ಣುವಡ್ಡರ ಸೇರಿದಂತೆ ಒಟ್ಟು 9 ಉಪಜಾತಿಗಳ ಸಮಗ್ರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದೇ ನಿಗಮದ ಪ್ರಮುಖ ಗುರಿಯಾಗಿದೆ. ರಾಜ್ಯದಲ್ಲಿ 20 ಲಕ್ಷ ಭೋವಿ ಸಮುದಾಯದ ಜನಾಂಗದವರು ಇದ್ದಾರೆ. ನಿಗಮದ ಹಣವು ಬಡವರ ಕೈಗೆ ಸೇರಬೇಕು. ಭೋವಿ ಜನಾಂಗದವರು ಅಧಿಕಾರಿಗಳ ಸಹಕಾರ ತೆಗೆದುಕೊಳ್ಳಬೇಕೇ ಹೊರತು ಅವರ ಮೇಲೆ ದಬ್ಬಾಳಿಕೆ ಮಾಡಬಾರದು ಎಂದು ಹೇಳಿದರು.ಯಾವುದೇ ಬ್ಯಾಂಕ್ನವರು ಬಡವರ ಹತ್ತಿರ ಸಿಬಿಲ್ ಸ್ಕೋರ್, ಜಮೀನು ಯಾವುದನ್ನೂ ಕೇಳದೇ ನೇರವಾಗಿ ಸಾಲ ಸೌಲಭ್ಯವನ್ನು ನೀಡಬೇಕು. ಒಂದು ತಿಂಗಳಲ್ಲಿ ಬ್ಯಾಂಕಿನವರು ಉತ್ತರ ನೀಡದಿದ್ದರೆ ಸಿಇಒ ಅವರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಲ್ಲು ಕ್ವಾರಿಗಳಲ್ಲಿ ತಳ್ಳುವ ಗಾಡಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಅವರಿಗೆ ಶೀಘ್ರವಾಗಿ ಸಾಲವನ್ನು ನೀಡಬೇಕು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ 1 ಲಕ್ಷ ರು.ವರೆಗೆ ಸಾಲ ನೀಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯಡಿ (ಕೃಷಿ ಭೂಮಿಗೆ ಕೊಳವೆ ಬಾವಿ ಮತ್ತು ಪಂಪ್ ಸೆಟ್) ಘಟಕಕ್ಕೆ 3.75 ಲಕ್ಷ ರು. ಕೊಡಲಾಗುತ್ತದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಸದಸ್ಯರಿದ್ದರೆ 5 ಲಕ್ಷ ರು. ಕೊಡಲಾಗುವುದು. ಭೂ ಒಡೆತನ ಯೋಜನೆಯಡಿ ಭೂರಹಿತ ಕುಟುಂಬಕ್ಕೆ 20 ಲಕ್ಷ ರು. ಘಟಕ ವೆಚ್ಚದಲ್ಲಿ ಭೂಮಿ ಖರೀದಿಗೆ ನೆರವು ನೀಡಲಾಗುತ್ತದೆ. ಹಸು, ಕುರಿ, ಮೇಕೆ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ 2.25 ಲಕ್ಷ ರು. ಘಟಕ ವೆಚ್ಚದಲ್ಲಿ ಸಹಾಯಧನ ಮತ್ತು ಸಾಲ ಸೌಲಭ್ಯ ಕಲ್ಪಿಸಲಾಗುವುದು. ಕುರಿ, ಹಸು ಸಾಕಾಣಿಕೆಯವರಿಗೆ ಸಾಲ ಸೌಲಭ್ಯದ ವೆಚ್ಚ ಕಡಿಮೆ ಇರುವುದರಿಂದ ನರೇಗಾ ಯೋಜನೆಯಡಿ ಶೆಡ್ ನಿರ್ಮಾಣ ಮಾಡಲು ಅವಕಾಶ ನೀಡುವಂತೆ ಸಿಇಒ ಅವರಿಗೆ ತಿಳಿಸಿದರು.
ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಅರ್ಜಿ ಹಿಂದೆ ಬೀಳುವ ಕೆಲಸ ಮಾಡಬೇಡಿ. ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಫಲಾನುಭವಿಗಳ ಆಯ್ಕೆ ಸಮಿತಿ ರಚಿಸಿ ಸೂಕ್ತ ಅರ್ಜಿದಾರರನ್ನು ಆಯ್ಕೆಮಾಡಿದರೆ ನಾವು ಶಿಪಾರಸು ಮಾಡಿ ನಿಗಮದಿಂದ ಸೌಲಭ್ಯವನ್ನು ಒದಗಿಸುತ್ತೇವೆ ಎಂದರು.
ಸ್ವಾವಲಂಭಿ ಸಾರಥಿ ಯೋಜನೆಯಡಿ ಸರಕು ವಾಹನವನ್ನು, ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ 4 ಲಕ್ಷ ರು. ಸಹಾಯಧನ ಉಳಿದಂತೆ ಬ್ಯಾಂಕ್ ಸಾಲವನ್ನು ನೀಡಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸಂವಿಧಾನದ ಪೀಠಿಕೆ ಓದಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಭೋವಿ ಅಭಿವೃದ್ದಿ ನಿಗಮದ ಅಧೀಕ್ಷಕ ಮಂಜುನಾಥ ವಡ್ಡರ ಹಾಜರಿದ್ದರು.