ಕುಷ್ಟಗಿ: ಮಕ್ಕಳು ಕೇವಲ ಪಾಠಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಅದಕ್ಕೆ ಪೂರಕವಾಗಿ ಶಾಲಾ ಶಿಕ್ಷಕರು ಶ್ರಮಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ನಡೆದ 2025-26ನೇ ಸಾಲಿನ ಕುಷ್ಟಗಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗೆ ತಕ್ಕಂತೆ ವೇದಿಕೆಯನ್ನು ಸೃಷ್ಟಿಸಬೇಕು. ಶಾಲಾ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಮೂಲಕ ಮಕ್ಕಳಲ್ಲಿರುವ ಸಂಕುಚಿತ ಮನೋಭಾವ ಹೋಗಲಾಡಿಸಲು ಶ್ರಮಿಸಬೇಕು. ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಪರಿಪೂರ್ಣ ನಾಗರಿಕರನ್ನಾಗಿ ಮಾಡಬೇಕಿದೆ. ತಾಲೂಕು ಮಟ್ಟದಲ್ಲಿ ಪ್ರತಿಭೆ ತೋರಿಸುವ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮಿಂಚುವಂತಾಗಲಿ ಎಂದರು.

ಬಿಇಒ ಉಮಾದೇವಿ ಬಸಾಪುರ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಸಲುವಾಗಿ 25 ವರ್ಷಗಳಿಂದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಅನುಕೂಲಕರವಾಗಿದೆ. ಎಲ್ಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಅನೂಕೂಲಕರವಾಗಿದೆ. ಈಗಿನ ಮಕ್ಕಳು ಮುಂದಿನ ನಾಗರಿಕರಾಗಿದ್ದು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನವಭಾರತ ನಿರ್ಮಾಣದ ಪರಿಕಲ್ಪನೆ ಮೂಡಿಸಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರುಕ್ ಡಾಲಾಯತ್ , ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶಪ್ಪ ಮೇಣೆದಾಳ, ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹಾಂತಯ್ಯ ಸೊಪ್ಪಿಮಠ ಡಯಟ್ ಉಪನ್ಯಾಸಕ ರಾಜೇಂದ್ರ ಬೆಳ್ಳಿ, ವೆಂಕಟೇಶ, ಗಣ್ಯರಾದ ಬಸವರಾಜ ಹಳ್ಳೂರು, ಗುರಪ್ಪ ಕುರಿ, ಎಂ.ಎಂ. ಗೊಣ್ಣಾಗರ, ಜಗದೀಶ ಸೂಡಿ, ಯಮನೂರಪ್ಪ ಚೂರಿ, ನೀಲನಗೌಡ ಹೊಸಗೌಡ್ರ, ವಿಠ್ಠಲ ಎಂ., ಮಹಾಂತೇಶ ಕೊಣ್ಣೂರು, ಶಾಕೀರ್ ಬಾಬಾ, ನಿಂಗಪ್ಪ ಗುನ್ನಾಳ, ಲಕ್ಷ್ಮಪ್ಪ ಪೂಜಾರ, ಅಯ್ಯಪ್ಪ, ಶರಣಪ್ಪ ತೆಮ್ಮಿನಾಳ, ಸಂಗಪ್ಪ ಗಡಾದ, ಶಿವಪ್ಪ ವಾಗಮೋರೆ, ಕಳಕಮಲ್ಲೇಶ, ಎಸ್.ಜಿ. ಕಡೆಮನಿ, ಗ್ಯಾನಪ್ಪ ರಾಂಪೂರು, ಶ್ರೀನಿವಾಸ ದೇಸಾಯಿ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ಪ್ರತಿಭಾ ಕಾರಂಜಿಯ ಚಟುವಟಿಕೆ ನಡೆಯಿತು.