ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡುದೇಶದಲ್ಲಿ ಇಂದಿನ ಅಂಕಿಅಂಶದ ಪ್ರಕಾರ ಸರಾಸರಿ ೫ ಲಕ್ಷ ಗಿಡಮರಗಳು ಕಡಿಮೆಯಾಗಿದೆ ಎಂದು ಬೇಲೂರಿನ ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಎಸ್. ಶಶಿಕಲಾ ತಿಳಿಸಿದರು.ಹಳೇಬೀಡಿನ ಕೆಪಿಎಸ್ ಶಾಲೆಯ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಆಡಳಿತ, ಶಾಲಾ ಶಿಕ್ಷಣ ಮತ್ತು ಅರಣ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿ ಮಾತನಾಡುತ್ತಾ, ಇಂದು ವಿಶ್ವ ಪರಿಸರ ದಿನಾಚರಣೆ. ಆದರೆ ಒಳ್ಳೆಯ ಪರಿಸರ ಸಿಗಬೇಕು ಎಂದರೆ ಗ್ರಾಮಾಂತರ ಪ್ರದೇಶಕ್ಕೆ ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಮ್ಮದಾಗಿದೆ. ಇಂದಿನ ಲೆಕ್ಕಚಾರದ ಪ್ರಕಾರ ಗಿಡಮರಗಳನ್ನು ನಾಶ ಮಾಡಿ ಮಾನವ ತನಗೆ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡಿಕೊಳ್ಳುತ್ತಿರುವುದು ಅತ್ಯಂತ ದುರಂತವಾಗಿದೆ ಎಂದರು. ಹಿಂದಿನ ಕಾಲದಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಗಾಲ ಮೂರು ಋತುಗಳು ಇದ್ದಂತ ಸಮಯದಲ್ಲಿ ಸಮಯ ತಕ್ಕಂತೆ ಮಳೆ, ಚಳಿ, ಬೇಸಿಗೆ ಇತ್ತು. ಆದರೆ ಇಂದಿನ ಕಾಲದಲ್ಲಿ ಬೇಸಿಗೆಕಾಲದಲ್ಲಿ ಮಳೆ, ಮಳೆಗಾಲದಲ್ಲಿ ಬಿಸಿಲು, ಚಳಿಗಾಲದಲ್ಲಿ ಮಳೆ ಮತ್ತು ಬಿಸಿಲು ಎರಡು ಬಂದು ಮನುಷ್ಯನ ಅನಾರೋಗ್ಯಕ್ಕೆ ಕಾರಣವಾಗಿದೆ. ಇವೆಲ್ಲವೂ ಪರಿಸರದ ಚಿಂತನೆ ಇಲ್ಲದೆ ಭೂ ಮಂಡಲ ಹಾಳಾಗುತ್ತಿದೆ. ಇಂದಿನ ಮಕ್ಕಳು ಪರಿಸರದ ಬಗ್ಗೆ ಗಮನಹರಿಸಿ ಶಾಲೆಯ ಎಲ್ಲಾ ಮಕ್ಕಳು ಒಂದು ಗಿಡಕ್ಕೆ ಐದು ಮಕ್ಕಳಂತೆ ನೇಮಿಸಿ ಗಿಡಗಳನ್ನು ಬೆಳೆಸಬೇಕು ಮುಂದಿನ ದಿನಗಳಲ್ಲಿ ಅತ್ಯುತ್ತಮವಾಗಿ ಬೆಳೆದಂತಹ ಗಿಡಗಳಿಗೆ ನಮ್ಮ ವೈಯಕ್ತಿಕವಾಗಿ ಬಹುಮಾನ ನೀಡಲಾಗುವುದು. ಪರಿಸರ ಉಳಿಸಿ ದೇಶ ಬೆಳೆಸಿ ಎಂದು ತಿಳಿಸಿದರು.ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡುತ್ತಾ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಸಂಕಲ್ಪವನ್ನು ಯುವ ಜನತೆ ಮಾಡಿದರೆ ಮುಂದಿನ ಪೀಳಿಗೆ ಒಳ್ಳೆಯ ಸಮಾಜದಲ್ಲಿ ಒಳ್ಳೆಯ ವಾತಾವರಣ ಸಿಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಸಂತ್ ಕುಮಾರ್, ಉಪ ಪ್ರಾಂಶುಪಾಲ ಮುಳ್ಳಯ್ಯ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಮಾ ವೆಂಕಟೇಶ, ಕೆಪಿಎಸ್ ಶಾಲಾ ಅಭಿವೃದ್ಧಿ ಅಧ್ಯಕ್ಷ ಸೋಮಶೇಖರ್, ಅರಣ್ಯ ವಲಯ ಅಧಿಕಾರಿ ಯತೀಶ್ ಕುಮಾರ್, ಶೈಲಾ, ವಕೀಲರ ಸಂಘದ ಕಾರ್ಯದರ್ಶಿ, ಪುಟ್ಟಸ್ವಾಮಿಗೌಡ ಮತ್ತು ಶ್ರೀಧರ್, ವಕೀಲರಾದ ಶಂಕರಾನಂದ, ಮಲ್ಲಿಕಾರ್ಜುನ, ಸಿದ್ದೇಗೌಡ, ಪಿ.ಡಿ.ಒ ವಿರೂಪಾಕ್ಷ, ಹಸಿರು ಭೂಮಿ ಸದಸ್ಯ ಮತ್ತು ಶಿಕ್ಷಕ ಮೋಹನರಾಜ್ ಬಂದಂತ ಅತಿಥಿಗಳಿಗೆ ಬ್ಯಾಲದ ಹಣ್ಣು ನೀಡಿದರು.