ಶಿಕ್ಷಣದಿಂದ ದೇವದಾಸಿ ಪದ್ಧತಿ ನಿರ್ಮೂಲನೆ: ನ್ಯಾ. ಮಹಾಂತೇಶ ದರಗದ

| Published : Mar 18 2025, 12:30 AM IST

ಸಾರಾಂಶ

ದೇವದಾಸಿಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸರ್ಕಾರದಿಂದ ಸೌಲಭ್ಯ ಕೊಡುವಂತೆ ಕೇಳುವ ಅಗತ್ಯವಿರುವುದಿಲ್ಲ. ನಿಮ್ಮ ಮಕ್ಕಳು ಶಿಕ್ಷಣ ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುತ್ತಾರೆ. ನೀವು ಯಾರಿಗೂ ತಲೆಬಾಗದಂತೆ ನಿಮ್ಮನ್ನು ನೋಡಿಕೊಳ್ಳುತ್ತಾರೆ.

ಕೊಪ್ಪಳ:

ದೇವದಾಸಿ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕೆಂದರೆ ಶಿಕ್ಷಣ ಅತ್ಯಗತ್ಯ. ನಿಮಗೆ ಸಾಧ್ಯವಾದರೆ ಮಕ್ಕಳನ್ನು ಓದಿಸಿ ಇಲ್ಲದಿದ್ದರೇ ಸರ್ಕಾರ ನಡೆಸುವ ವಸತಿ ಶಾಲೆಗಳಿಗೆ ಸೇರಿಸಿಯಾದರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ. ಅಂದಾಗ ಮಾತ್ರ ಈ ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಠ ಪದ್ಧತಿ ಹೋಗಲಾಡಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಹೇಳಿದರು.

ತಾಲೂಕಿನ ಶಿವಪುರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಶಿವಪುರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಾಜಿ ದೇವದಾಸಿಯರಿಗೆ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.

ದೇವದಾಸಿಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸರ್ಕಾರದಿಂದ ಸೌಲಭ್ಯ ಕೊಡುವಂತೆ ಕೇಳುವ ಅಗತ್ಯವಿರುವುದಿಲ್ಲ. ನಿಮ್ಮ ಮಕ್ಕಳು ಶಿಕ್ಷಣ ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುತ್ತಾರೆ. ನೀವು ಯಾರಿಗೂ ತಲೆಬಾಗದಂತೆ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು.

ಉಪನ್ಯಾಸ ನೀಡಿದ ವಕೀಲ ರವಿಚಂದ್ರ ಆರ್. ಮಾಟಲದಿನ್ನಿ, ದೇವದಾಸಿ ಬಿಡುವ ಪದ್ಧತಿ ನಿಷೇಧಿಸಿ 43 ವರ್ಷವಾದರು ಇನ್ನು ದೇವದಾಸಿ ಪದ್ಧತಿ ಬಗ್ಗೆ ಮಾತನಾಡುತ್ತಿದ್ದೇವೆ. ಇಂತಹ ಅನಿಷ್ಟ ಪದ್ಧತಿಗೆ ಹೆಣ್ಣು ಮಕ್ಕಳನ್ನು ದೂಡಿದಲ್ಲಿ 2ರಿಂದ 5 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಪದ್ಧತಿಯನ್ನು ನಾವು ಬೇರು ಸಮೇತ ಕಿತ್ತೊಗೆಯಬೇಕು ಎಂದರು. ವಕೀಲ ಕೆ.ಎಂ. ಶಿವಪುರ ಮಾತನಾಡಿ, ಸರ್ಕಾರದಿಂದ ಮಾಜಿ ದೇವದಾಸಿಯರಿಗೆ ಇರುವ ಸೌಲಭ್ಯ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕೆಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ವೆಂಕಟೇಶ.ಎನ್. ಚನ್ನದಾಸರ, ಸರ್ಕಾರದ ಜಮೀನನ್ನು ದೇವದಾಸಿಯರಿಗೆ ಒದಗಿಸುವಂತೆ ಕ್ರಮಕೈಗೊಳ್ಳಲು ಮನವಿ ಮಾಡಿದರು.

ವಕೀಲ ಕೆ.ಎಸ್. ಮೈಲಾರಪ್ಪ, ಬಾಲ್ಯ ವಿವಾಹ ಮತ್ತು ಪೋಕ್ಸೊ ಕಾಯ್ದೆ ಹಾಗೂ ವಕೀಲ ಸಂತೋಷ ಬಾದರ ಬಂಡಿ ಸೈಬರ್ ಅಪರಾಧದ ಮುಂಜಾಗ್ರತೆ ಬಗ್ಗೆ ವಿವರಿಸಿದರು.

ಈ ವೇಳೆ ವಕೀಲ ಜಿ.ಎಂ. ಶಿವಪುರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ, ಸಖಿ ಒನ್ ಸ್ಟಾಫ್‌ ಸೆಂಟರ್‌ ಆಡಳಿತಾಧಿಕಾರಿ ಯಮುನಾ ಬೆಸ್ತ, ಗ್ರಾಪಂ ಅಧ್ಯಕ್ಷರಾದ ಚಲಸಾನಿ ರವಿಕುಮಾರ ಮತ್ತು ಸಿಬಿಆರ್ ಪ್ರಸಾದ, ಪಿಡಿಒ ವಾಗೇಶ. ಗ್ರಾಪಂ ಸದಸ್ಯರಾದ ಹುಲಿಗೆಮ್ಮ, ಯಮನೂರಪ್ಪ, ಮಿಷನ್ ಶಕ್ತಿಯ ಫಾತೀಮಾ, ಪಿಐಒ ರೇಣುಕಾ, ಸಕ್ಕೂಬಾಯಿ, ದಾದೇಸಾಬ್‌ ಹಿರೇಮನಿ ಇದ್ದರು.