ಬಸರಕೋಡ ಗ್ರಾಮದ ಸುಖಮುನಿ ಎಂಬ ರೈತರ ಜಮೀನಿಗೆ ಶನಿವಾರ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಸ್ವಲ್ಪ ಮಳೆಯಾಗಿ ನೀರು ಬಂದರೂ ಒಡ್ಡು ಒಡೆದು ಹೋಗುತ್ತದೆ.

ಸಂಜೀವಕುಮಾರ ಹಿರೇಮಠಹೊಳೆಆಲೂರು: ಹೊಳೆಆಲೂರು ಹೋಬಳಿಯ ಹಲವೆಡೆ ಶನಿವಾರ ಸಂಜೆ ಗುಡುಗುಸಹಿತ ಬಾರಿ ಗಾಳಿ ಮಳೆಗೆ ರೈತರ ಜಮೀನುಗಳ ಒಡ್ಡು ಒಡೆದು ಭಾರಿ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಬಿತ್ತುವ ಸಮಯದಲ್ಲಿದ್ದ ರೈತರನ್ನು ಕಂಗಾಲಾಗಿಸಿದೆ.

ಹುನಗುಂಡಿ ಹಾಗೂ ನೈನಾಪುರ ಗ್ರಾಮದ ರಸ್ತೆ ನಡುವೆ ಇರುವ ಕಳ್ಳಿಹಳ್ಳಕ್ಕೆ 3 ವರ್ಷದ ಹಿಂದೆ ನಿರ್ಮಿಸಿದ್ದ ಬ್ರಿಡ್ಜ್‌ ಮಾರಕವಾಗಿದೆ. 3 ಪೈಪ್ ಜೋಡಿಸಿ ಬ್ರಿಡ್ಜ್‌ ರೀತಿ ಕಟ್ಟಲಾಗಿದೆ. ವ್ಯವಸ್ಥಿತ ಕಾಮಗಾರಿ ಮಾಡದೆ ಇರುವುದರಿಂದ ಸತತ ಮೂರು ವರ್ಷಗಳಿಂದ ರೈತರ ಜಮೀನುಗಳಿಗೆ ನುಗ್ಗಿ ಸಂಪೂರ್ಣ ನಾಶ ಮಾಡತೊಡಗಿದೆ. ಕಾಮಗಾರಿ ಅಲ್ಲಲ್ಲಿ ತಗ್ಗು ದಿನ್ನೆಗಳಿಂದ ಇದ್ದು, ವೈಜ್ಞಾನಿಕವಾಗಿ ಆಗಿಲ್ಲ. ಹೀಗಾಗಿ ಒಡ್ಡು ಒಡೆದು ಜಮೀನಿನ ಮಣ್ಣು ಹರಿದುಹೋಗುತ್ತಿದೆ ಎಂಬುದು ರೈತರ ಆರೋಪ.

ಬಸರಕೋಡ ಗ್ರಾಮದ ಸುಖಮುನಿ ಎಂಬ ರೈತರ ಜಮೀನಿಗೆ ಶನಿವಾರ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಸ್ವಲ್ಪ ಮಳೆಯಾಗಿ ನೀರು ಬಂದರೂ ಒಡ್ಡು ಒಡೆದು ಹೋಗುತ್ತದೆ. ಪ್ರತಿವರ್ಷ ₹30ರಿಂದ ₹40 ಸಾವಿರ ಖರ್ಚು ಮಾಡಿ ಮಣ್ಣು ತರಿಸಿ ಹಾಕಿಸುತ್ತಿದ್ದಾರೆ. ಪ್ರಸಕ್ತ ವರ್ಷ ಈ ರೀತಿ ಆಗಬಾರದು ಅನ್ನೋ ಕಾರಣಕ್ಕೆ ₹80ರಿಂದ ₹90 ಸಾವಿರ ಖರ್ಚು ಮಾಡಿ 56 ಟ್ರಿಪ್ ಮಣ್ಣು ಹಾಕಿಸಿದ್ದಾರೆ. ಆದರೆ ಶನಿವಾರ ರಾತ್ರಿ ಬಾರಿ ಮಳೆ ಅವ್ಯವಸ್ಥಿತ ಕಾಮಗಾರಿ ರೈತನ ಜಮೀನಿಗೆ ಮತ್ತೆ ನುಗ್ಗಿ ಸಂಪೂರ್ಣ ಹಾಳು ಮಾಡಿದೆ.ಸಾಲು ಸಾಲು ಮನವಿ: ಈ ಮೊದಲು ಕಾಮಗಾರಿ ಆರಂಭಿಸಿದಾಗ ಇಲ್ಲಿಯ ರೈತರು ಮೊದಲು ಹೇಗೆ ಇತ್ತು ಹಾಗೆ ಮಾಡಿ ಎಂದು ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಕಿವಿಗೊಡದ ಅಧಿಕಾರಿಗಳು, ರೈತರಿಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ಮಾಡುತ್ತೇವೆ ಮತ್ತು ಅದನ್ನು ಸರಿಪಡಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. ನಂಬಿದ ರೈತರು ರಸ್ತೆ ಸರಿಯಾದರೆ ಸಾಕು ಎಂದು ಸುಮ್ಮನಾಗಿದ್ದಾರೆ. ನಂತರ ಮೊದಲ ವರ್ಷವೇ ರೈತನ ಒಡ್ಡು ಒಡೆದು ಹೋಗಿದೆ. ಕಾಮಗಾರಿ ಮಾಡಿದವರಿಗೆ ಹೇಳಿದರೆ ತಿರುಗಿ ನೋಡದ ಕಾರಣ ಅಧಿಕಾರಿಗಳನ್ನು ಭೇಟಿ ಮಾಡಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಸತತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಒಡೆದು ಹಾಕುತ್ತೇವೆ: 3 ವರ್ಷದಿಂದ ಜಮೀನು ಹಾಳು ಮಾಡಿಕೊಳ್ಳುತ್ತಾ ಸಂಕಷ್ಟ ಅನುಭವಿಸುತ್ತಿರುವ ರೈತರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಅಲ್ಲದೆ ಈ ಕಾಮಗಾರಿಯಿಂದ ಸುತ್ತ ಇರುವ ಜಮೀನುಗಳ ಕಟ್ಟಿದ ಕಟ್ಟೆ ಒಡೆಯುತ್ತಿವೆ. ಆದ್ದರಿಂದ ಸರಿಯಾಗಿ ನೀರು ಹರಿದು ಹೋಗುವಂತೆ ಮಾಡದೇ ಕುಂಟುನೆಪ ಹೇಳುತ್ತಾ ಹೋದರೆ ದಿಕ್ಕು ತಪ್ಪಿರುವ ಕಾಮಗಾರಿ ಒಡೆದು ಹಾಕುತ್ತೇವೆ ಎಂದು ಹುನಗುಂಡಿ, ಬಸರಕೋಡ, ಮಾಡಲಗೇರಿ, ನೈನಾಪುರ ಗ್ರಾಮದ ರೈತರು ಎಚ್ಚರಿಸಿದ್ದಾರೆ.

ಇಲ್ಲಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಶಾಖಾ ಅಧಿಕಾರಿ ಪರಿಶೀಲನೆ ನಡೆಸಿ, ಮೊದಲು ಎರಡು ಮೂರು ಬಾರಿ ರೈತನ ಜಮೀನಿಗೆ ವಾಲ್ (ತಡೆಗೋಡೆ) ನಿರ್ಮಾಣಕ್ಕೆ ಅನುಮೋದನೆ ಕಳಿಸಿದ್ದೇವೆ. ಬಹಳಷ್ಟು ಪ್ರಮಾಣದ ಮಳೆ ಆಗಿರುವುದರಿಂದ ಸಮಸ್ಯೆ ಆಗಿದೆ ಎಂದರು.

₹2 ಲಕ್ಷ ಖರ್ಚು: ಈ ಕಾಮಗಾರಿಯಿಂದ ಸುತ್ತಮುತ್ತ ಇರುವ ಜಮೀನುಗಳು ಹಾಳಾಗುತ್ತಿವೆ. 3 ವರ್ಷದಿಂದ ಪಡಬಾರದ ಪಾಡು ಪಟ್ಟಿದ್ದೇನೆ. 3 ವರ್ಷದಲ್ಲಿ ₹2 ಲಕ್ಷದವರೆಗೆ ಒಡ್ಡು ಹಾಕಿಸಲು ಖರ್ಚು ಮಾಡಿದ್ದೇನೆ. ನಮ್ಮ ಕಷ್ಟ ಯಾರಿಗೆ ಹೇಳೋಣ ಎಂದು ರೈತ ಸುಖಮುನಿ ಮೂರುಪಡಿ ತಿಳಿಸಿದರು.