ಸಾರಾಂಶ
ವಿಶ್ವ ಕಂಡ ಮಹಾನ್ ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಆದಿಚುಂಚನಗಿರಿ ಮಠದೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು. ಅಂತಹ ಮಹಾನ್ ವ್ಯಕ್ತಿಯ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಶದ ಭಾವಿ ಸತ್ಪ್ರಜೆಗಳಾಗುವ ವಿದ್ಯಾರ್ಥಿಗಳು ಡಾ.ಎ.ಪಿ.ಜೆ.ಅಬ್ದುಲ್ ಕಲಾಂರಂತಹ ಮೇರು ವ್ಯಕ್ತಿಗಳ ಉತ್ತಮ ಸಂದೇಶ, ಮೌಲ್ಯಗಳನ್ನು ಶಿಕ್ಷಣ ಮತ್ತು ಜೀವನದಲ್ಲಿ ಅಳವಡಿಸಿಕೊಂಡು ಈಗಿನಿಂದಲೇ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಪಿತಾಮಹ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನವಾದ ವಿಶ್ವ ವಿದ್ಯಾರ್ಥಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಅಬ್ದುಲ್ ಕಲಾಂ ಅವರ ಮಾರ್ಗದಲ್ಲಿ ನಡೆದು ಶ್ರೇಷ್ಠ ಗುರಿಯ ಅರಿವು ಹಾಗೂ ಪೂರಕ ಪರಿಶ್ರಮದಿಂದ ಯಶಸ್ವಿ ಸಾಧಕರಾಗಬೇಕು. ಸಾಧನೆಗೆ ಪೂರಕವಾದ ಮಾರ್ಗದಲ್ಲಿ ಸಾಗುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿಶ್ವ ಕಂಡ ಮಹಾನ್ ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಆದಿಚುಂಚನಗಿರಿ ಮಠದೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು. ಅಂತಹ ಮಹಾನ್ ವ್ಯಕ್ತಿಯ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ ಮಾತನಾಡಿದರು.ಅಬ್ದುಲ್ ಕಲಾಂ ಅವರ ಜೀವನ ಗಾಥೆ ಕುರಿತ ಭಾಷಣ, ಗಾಯನ, ಕವನ ಸೇರಿದಂತೆ ಇಡೀ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಉತ್ಸಾಹದಿಂದ ನಿರೂಪಿಸಿ ನಡೆಸಿಕೊಟ್ಟರು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ವೇಷದಲ್ಲಿ ಬಂದಿದ್ದ ಮಾಸ್ಟರ್ ಅಖಿಲ್ರನ್ನು ವಿದ್ಯಾರ್ಥಿನಿ ಜೆ.ಎಸ್. ಸನ್ನಿಧಿ ಸಂದರ್ಶನ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.
ಈ ವೇಳೆ ಉಪಪ್ರಾಂಶುಪಾಲೆ ಸಿ.ದರ್ಶಿನಿ, ಅಧ್ಯಾಪಕರಾದ ಬಿ.ಜೆ.ಹೇಮಾ, ಕೆ.ಆರ್.ರಮ್ಯಶ್ರೀ, ವಿಜಯಲಕ್ಷ್ಮಿ, ದಿಲೀಪ್, ಅಭಿ, ಶಾಲಾ ಸಂಯೋಜಕರು ಸೇರಿದಂತೆ ಹಲವರು ಇದ್ದರು.