ಬ್ಯಾಡಗಿ: ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆ, ಮಾನವೀಯತೆ ಮತ್ತು ರಾಷ್ಟ್ರೀಯತೆ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಮಾರಕವಾಗದೇ ಆದರ್ಶಪ್ರಾಯರಾಗುವ ಮೂಲಕ ಸಮಾಜದ ಎಲ್ಲ ವರ್ಗಗಳ ಜನರ ಜೊತೆಗೆ ಹೊಂದಿಕೊಂಡು ನಡೆದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಪರಂಪರಾಕೂಟ ಎನ್ಎಸ್ಎಸ್ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಲೇಜು ಆವರಣದಲ್ಲಿ ರು. 2 ಕೋಟಿ ವೆಚ್ಚದಲ್ಲಿ ಆಡಿಟೋರಿಯಂ ಕಟ್ಟಡ ನಿರ್ಮಾಣ ಮಾಡಲು ಮಂಜೂರಾತಿ ದೊರೆತಿದೆ, ಶಿಕ್ಷಣಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಅನುದಾನ ಖರ್ಚು ಮಾಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು ಮುಂದಿನ ಗುರಿ ಇಟ್ಟುಕೊಂಡು ಜ್ಞಾನ ಪಡೆಯಬೇಕು ಎಂದರು.ಮೋಟೆಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸತೀಶ ಬೇವಿನಹಳ್ಳಿ ಮಾತನಾಡಿ, ಇಂದಿನ ಯುಗದಲ್ಲಿ ಯಾವುದೇ ಟೆಕ್ನಾಲಜಿ ಬಂದರು ಕೂಡ ಮಾನವನ ಬುದ್ಧಿ ಮಟ್ಟವನ್ನು ದಾಟಿ ಹೋಗಲು ಸಾಧ್ಯವಿಲ್ಲ. ಪರ್ವತದೆತ್ತರದಂತ ಟೆಕ್ನಾಲಜಿ ಬಂದರು ಕೂಡ ಕುಗ್ಗದೇ ವ್ಯಾಸಂಗದಲ್ಲಿ ಗುರಿ ಇಟ್ಟುಕೊಂಡು ಜ್ಞಾನವನ್ನು ಪಡೆಯ ಬೇಕು, ಜ್ಞಾನ ನಮ್ಮ ಕೈಬೆರಳ ತುದಿಯಲ್ಲಿದೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ತಾಳ್ಮೆ ಮುಖ್ಯ ಮುಂದೊಂದು ದಿನ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಮನಸ್ಸು ಸಾಧನೆಯ ಹಾದಿಯನ್ನೇ ತುಳಿಯಬೇಕು ಹೊರತು ಅದನ್ನು ಬಿಟ್ಟು ಬೇರೆಡೆ ಸಾಗಬಾರದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಧ್ಯಾಪಕ ಎಚ್.ಜಿ. ಸಣಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಮಲ್ಲಿಕಾರ್ಜುನ ಕಡ್ಡಿಪುಡಿ, ಪ್ರಾಧ್ಯಾಪಕ ಡಾ. ಬಿ.ಎನ್. ದೇವೆಂದ್ರಪ್ಪ, ಡಾ.ವಿ.ಎಂ. ಕಮ್ಮಾರ, ಮುಖಂಡರಾದ ಮುನಾಫ್ ಎರೇಶಿಮಿ, ದುರ್ಗೇಶ ಗೊಣೇಮ್ಮನವರ, ಮಜೀದ ಮುಲ್ಲಾ ಉಪಸ್ಥಿತರಿದ್ದರು. ಡಾ.ಪಿ. ಸತೀಶ ಸ್ವಾಗತಿಸಿ, ವಂದಿಸಿದರು.