ಉತ್ತರ ಕನ್ನಡ ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಮಸ್ಯೆಗೆ ತುರ್ತು ಸ್ಪಂದನೆ

| Published : May 23 2025, 12:14 AM IST / Updated: May 23 2025, 12:15 AM IST

ಉತ್ತರ ಕನ್ನಡ ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಮಸ್ಯೆಗೆ ತುರ್ತು ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯನಿರ್ವಹಿಸುವ ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ, ನೆರವು ನೀಡಲಾಗುತ್ತಿದೆ.

ಕಾರವಾರ: ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿದಿಂದ ಅಗತ್ಯವಿರುವ ಎಲ್ಲ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯನಿರ್ವಹಿಸುವ ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ, ನೆರವು ನೀಡಲಾಗುತ್ತಿದೆ.

ತುರ್ತು ನಿರ್ವಹಣಾ ಕೇಂದ್ರಕ್ಕೆ ಬರುವ ಎಲ್ಲ ರೀತಿಯ ಕರೆಗಳ ಮತ್ತು ವಾಟ್ಸಾಪ್ ಮೂಲಕ ದಾಖಲಾಗುವ ಸಮಸ್ಯೆಗಳನ್ನು ದಾಖಲಿಸಿಟ್ಟುಕೊಂಡು ಅವುಗಳನ್ನು ಸಂಬoದಪಟ್ಟ ಇಲಾಖೆಗಳಿಗೆ ಕಳುಹಿಸಿ, ಆ ಸಮಸ್ಯೆಗಳಿಗೆ ಪರಿಹಾರ ಒಗದಿಸುವ ಕಾರ್ಯವನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ಮಾಡುತ್ತಿದ್ದು, ಹಲವು ಸಮಸ್ಯೆಗಳಿಗೆ ಕನಿಷ್ಠ 20 ನಿಮಿಷದಿಂದ 1 ಗಂಟೆಯ ಒಳಗೆ ಪರಿಹಾರವನ್ನು ಒದಗಿಸಲಾಗಿದೆ.

ಮೇ 22 ರಂದು ಭಟ್ಕಳದ ಯಲ್ವಡಿಕರ್ ನಲ್ಲಿ ಮನೆ ಹಾನಿಯಾದ ಕುರಿತಂತೆ ಬೆಳಗ್ಗೆ 11.10ಕ್ಕೆ ದೂರು ಸ್ವೀಕಾರವಾಗಿದ್ದು, ತಕ್ಷಣವೇ ಅದನ್ನು ಭಟ್ಕಳ ತಹಸೀಲ್ದಾರ್ ಅವರಿಗೆ ವರ್ಗಾಯಿಸಲಾಗಿದೆ. 11.30ಕ್ಕೆ ಆ ಸ್ಥಳಕ್ಕೆ ಬೇಟಿ ನೀಡಿದ ಕಂದಾಯ ನಿರೀಕ್ಷಕರು ಮತು ಗ್ರಾಮ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮತ್ತು ಶಿರಸಿಯ ಹುಲೇಕರ್ ಮತ್ತು ಕೆ.ಎಚ್.ಬಿ ಕಾಲೋನಿಯಲ್ಲಿನ ಮನೆ ಹಾನಿ ಕುರಿತು ದೂರುಗಳಿಗೆ ಸಂಬಂಧಪಟ್ಟ ಸ್ಥಳಗಳಿಗೆ ಕಂದಾಯ ನಿರೀಕ್ಷಕರು ಮತು ಗ್ರಾಮ ಆಡಳಿತಾಧಿಕಾರಿಗಳು ತ್ವರಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರದ ಹೈ ಚರ್ಚ್‌ ರೋಡ್ ನಲ್ಲಿ ಚರಂಡಿಯಲ್ಲಿ ನೀರು ಹರಿಯಲು ತೊಂದರೆಯಾದ ಕುರಿತು 12.28 ಕ್ಕೆ ದಾಖಲಾದ ದೂರು ಕಾರವಾರ ನಗರಸಭೆಗೆ ವರ್ಗಾವಣೆಯಾಗಿದ್ದು, ಮದ್ಯಾಹ್ನ 4.58 ಕ್ಕೆ ಇಡೀ ಚರಂಡಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಗೋಕರ್ಣದಲ್ಲಿ ಚರಂಡಿ ಬಳಿ ಇದ್ದ ತ್ಯಾಜ್ಯದ ರಾಶಿಯ ಕುರಿತು 10.58 ಕ್ಕೆ ಸಲ್ಲಿಕೆಯಾದ ದೂರಿಗೆ ಕುರಿತಂತೆ 12.50 ಕ್ಕೆ ಆ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ನೌಕಾನೆಲೆಯ ಅರ್ಗಾ ಬಳಿ ರಸ್ತೆಗೆ ಮರ ಬಿದ್ದ ಬಗ್ಗೆ ಸಂಜೆ 5.20 ಕ್ಕೆ ದೂರು ದಾಖಲಾಗಿದ್ದು, ಅರಣ್ಯ ಇಲಾಖೆ ಮತ್ತು ಐ.ಆರ್.ಬಿ ಅವರಿಗೆ ಈ ದೂರು ವರ್ಗಾವಣೆಯಾಗಿದ್ದು, 5.30 ರ ವೇಳೆಗೆ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರಕ್ಕೆ ಸಲ್ಲಿಕೆಯಾಗುವ ಎಲ್ಲಾ ದೂರುಗಳ ಕುರಿತಂತೆ ದೂರುದಾರರ ಸಂಪರ್ಕ ಸಂಖ್ಯೆ, ಸಮಯ ಸೇರಿದಂತೆ ಸಂಪೂರ್ಣ ಮಾಹಿತಿಯಂತೆ ದಾಖಲಿಸಲಾಗುತ್ತಿದ್ದು, ಈ ಕೇಂದ್ರದಲ್ಲಿ ತುರ್ತು ಕಾರ್ಯಚರಣೆ ಕೈಗೊಳ್ಳುವ ಇಲಾಖೆಗಳಾದ ಪೊಲೀಸ್, ಅರಣ್ಯ, ಕಂದಾಯ, ಬಿ.ಎಸ್.ಎನ್.ಎಲ್, ಹೆಸ್ಕಾಂ ಇಲಾಖೆಗಳ ಸಿಬ್ಬಂದಿಯನ್ನು 24*7 ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದು, ತಮ್ಮ ಇಲಾಖೆಯ ದೂರುಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುತ್ತಿದ್ದು, ಈ ಬಗ್ಗೆ ದೂರಿನ ಅಥವಾ ಸಮಸ್ಯೆಯ ಅರಂಭದ ಛಾಯಾಚಿತ್ರ ಮತ್ತು ಅದು ಪರಿಹಾರವಾದ ನಂತರದ ಸಮಯ ಮತ್ತು ಛಾಯಾಚಿತ್ರಗಳ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.

ಜಿಲ್ಲೆಯ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ತಮ್ಮ ಯಾವುದೇ ಸಮಸ್ಯೆಗಳಿಗಾಗಿ ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ 24*7 ಉಚಿತ ಟೋಲ್ ಪ್ರೀ ಸಂಖ್ಯೆ. 1077, ದೂರವಾಣಿ ಸಂಖ್ಯೆ:08382-229857, ವಾಟ್ಸಾಪ್ ಸಂಖ್ಯೆ.9483511015 ನ್ನು ಸಂಪರ್ಕಿಸಿ ತಮ್ಮ ದೂರುಗಳನ್ನು ಸಲ್ಲಿಸಬಹುದು.