ಕನ್ನಡಪ್ರಭ ವಾರ್ತೆ ಮುಧೋಳ
ಕೈಗಾರಿಕೆಗಳಲ್ಲಿ ಅಪಘಾತ ನಡೆಯದಂತೆ ದಕ್ಷತೆ ವಹಿಸುವುದು ಕಾರ್ಖಾನೆ ನಡೆಸುವಷ್ಟೇ ಮಹತ್ವದ್ದಾಗಿದೆ. ಪ್ರತಿಯೊಬ್ಬ ಕಾರ್ಮಿಕನನ್ನು ಅವಲಂಬಿಸಿದ ಕುಟುಂಬವಿರುತ್ತದೆ. ಕಾರ್ಮಿಕರಿಗೆ ಧಕ್ಕೆ ಆದರೆ ಕುಟುಂಬಕ್ಕೆ ಹಾನಿಯಾಗುತ್ತದೆ. ಎಲ್ಲಕ್ಕಿಂತಲೂ ಜೀವ ಅಮೂಲ್ಯವಾದದ್ದು ಎಂದು ನಿರಾಣಿ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ವಿಶಾಲ್ ಮುರುಗೇಶ ನಿರಾಣಿ ಹೇಳಿದರು.ಸಕ್ಕರೆ ಕೈಗಾರಿಕೆಗಳಲ್ಲಿ ಸುರಕ್ಷತೆ ಮತ್ತು ಉದ್ಯೋಗಿಗಳ ಆರೋಗ್ಯದ ಮಹತ್ವ ಕುರಿತು ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಕೆಲಸಗಾರರು ಸುರಕ್ಷತೆಯ ಸಾಧನಗಳನ್ನು ಕಟ್ಟುನಿಟ್ಟಾಗಿ ಬಳಸಬೇಕು. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆಯೂ ಗಮನ ಕೊಡಬೇಕು. ಕೈಗಾರಿಕೆ ಸುರಕ್ಷತೆಯ ಬಗ್ಗೆ ಸರಕಾರ ಸಾಕಷ್ಟು ಕಾನೂನು ರಚಿಸಿದೆ. ಅವುಗಳನ್ನು ಎಲ್ಲರೂ ಜವಾಬ್ದಾರಿಯಿಂದ ಪಾಲಿಸುವುದು ಅವಶ್ಯವಿದೆ ಎಂದರು.
ಬೆಳಗಾವಿ ವಿಭಾಗದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ಸುಖದೇವ್ ಬನಸೋಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುರಕ್ಷತೆತ್ತ ಮುನ್ನಡೆಯೋಣ ಎಂಬ ಈ ವರ್ಷದ ಧ್ಯೇಯ ವಾಕ್ಯದ ಮಹತ್ವ ವಿವರಿಸಿದರು.ವಿಚಾರ ಸಂಕಿರಣದಲ್ಲಿ ಕೈಗಾರಿಕೆ ಮತ್ತು ಬಾಯ್ಲರ್ ಇಲಾಖೆಯ ನಿರ್ದೇಶಕ ಜಿ.ಕೆ. ನಂಜಪ್ಪ, ಹೆಚ್ಚುವರಿ ನಿರ್ದೇಶಕ ರವೀಂದ್ರನಾಥ ರಾಥೋಡ್, ಉಪ ನಿರ್ದೇಶಕ ವೆಂಕಟೇಶ್ ರಾಥೋಡ್ ಮತ್ತು ಡಾ.ಸೆಫಿ ಸಾಹೇಬ್ ಬನದ್ ಅವರು ವಿಶೇಷ ಉಪನ್ಯಾಸ ನೀಡಿದರು.
ನಿರಾಣಿ ಸಮೂಹದ ಹಿರಿಯ ತಾಂತ್ರಿಕ ನಿರ್ದೇಶಕ ಮುರುಗೇಶ್ ಹತ್ತಿಕಾಳ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಾಜ್ಯದ 40 ಸಕ್ಕರೆ ಕಾರ್ಖಾನೆಗಳ ಸುಮಾರು 300 ಪ್ರತಿನಿಧಿಗಳು ಭಾಗವಹಿಸಿದ್ದರು.