ಮಾನವೀಯ ಮೌಲ್ಯಗಳ ಸಾಹಿತ್ಯ ರಚನೆಗೆ ಒತ್ತು ನೀಡಿ: ಡಿ.ಎನ್. ಅಕ್ಕಿ

| Published : Feb 09 2024, 01:47 AM IST

ಮಾನವೀಯ ಮೌಲ್ಯಗಳ ಸಾಹಿತ್ಯ ರಚನೆಗೆ ಒತ್ತು ನೀಡಿ: ಡಿ.ಎನ್. ಅಕ್ಕಿ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಿ.ಎನ್. ಅಕ್ಕಿ ಅವರಿಗೆ ಅಧಿಕೃತ ಆಹ್ವಾನ

ಕನ್ನಡಪ್ರಭ ವಾರ್ತೆ ಶಹಾಪುರ

ಯುವ ಸಾಹಿತಿಗಳು ಮಾನವೀಯ ಮೌಲ್ಯಗಳುಳ್ಳ ಸಾಹಿತ್ಯ ರಚನೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹಿರಿಯ ಸಾಹಿತಿ, ಸಂಶೋಧಕ ಹಾಗೂ ಶಹಾಪುರ ತಾಲೂಕು 4ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಿ. ಎನ್. ಅಕ್ಕಿ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂಡಿಯಲ್ಲಿ ಅವರ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದ ಅಧಿಕೃತ ಆಹ್ವಾನ ಹಾಗೂ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮನುಷ್ಯ ಬದುಕಿನ ಪ್ರೀತಿ, ಪ್ರೇಮ, ಮಾನವೀಯ ಮೌಲ್ಯಗಳನ್ನು ಹಂಚುವುದೇ ಸಾಹಿತ್ಯದ ಪ್ರಮುಖ ಆಶಯವಾಗಿದೆ. ಸಗರನಾಡಿನ ಹಿರಿಯ ಸಾಹಿತಿಗಳು ತಮ್ಮ ಅಮೂಲ್ಯ ಕೃತಿಗಳ ಮೂಲಕ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಪ್ರತಿಭೆ, ಸಾಧನೆಗೆ ಜಾತಿ, ಮತ, ಪಂಥದ ಬಣ್ಣ ಹಚ್ಚಬಾರದು. ಪ್ರತಿಭೆ ಯಾವುದೇ ಇರಲಿ, ಅದು ನಾಡಿನ ಸಾರಸ್ವತ ಲೋಕದ ಸಂಪತ್ತು ಎಂಬುದು ಮರೆಯಬಾರದು. ಶಹಾಪುರದ ಸಾಂಸ್ಕೃತಿಕ ಪರಿಸರದಲ್ಲಿ ಐತಿಹಾಸಿಕ ಪರಂಪರೆ ಸಾರುವ ಶಾಸನಗಳು, ಸ್ಮಾರಕಗಳು ಉಳಿಸಿ, ಬೆಳೆಸಲು ಶಹಾಪುರ ನಗರದಲ್ಲಿ ಮ್ಯೂಜಿಯಂ ಸ್ಥಾಪಿಸಬೇಕು ಎಂದರು.

ಕಸಾಪ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಮಾತನಾಡಿ, ಹಿರಿಯ ಸಂಶೋಧಕ, ಸಾಹಿತಿ ಡಿ.ಎನ್. ಅಕ್ಕಿ ಅವರ ವ್ಯಕ್ತಿತ್ವ ಮತ್ತು ಸಾಧನೆ ನಮಗೆ ಮಾದರಿ. ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಹಿರಿಯ ಪತ್ರಕರ್ತ ನಾರಾಯಣಚಾರ್ಯ ಸಗರ ಮಾತನಾಡಿ, ಡಿ.ಎನ್.ಅಕ್ಕಿ ಮತ್ತು ಹಿರಿಯ ಸಾಹಿತಿ ಸಗರ ಕೃಷ್ಣಚಾರ್ಯ ಅವರ ಭಾವನಾತ್ಮಕ ಸಂಬಂಧ ಕುರಿತು ತಿಳಿಸಿದರು.

ಗೋಗಿ ವಲಯ ಸಾಹಿತ್ಯ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ಮತ್ತು ಭೀಮರಾಯನಗುಡಿ ವಲಯ ಕಸಾಪ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ, ಮಡಿವಾಳಪ್ಪ ಪಾಟೀಲ್ ಅವರು, ಡಿ.ಎನ್. ಅಕ್ಕಿ ಅವರ ಸಾಹಿತಿಕ ಕೊಡುಗೆಗಳ ಕುರಿತು ತಿಳಿಸಿದರು.

ಪ್ರಭುಲಿಂಗ ಕತ್ತಿ, ಮಲ್ಲಾರಡ್ಡಿ ಪಾಟೀಲ್ ಹೋತಪೇಟ, ಶರಣು ಕಾಂಬಳೆ, ಗೌಡಪ್ಪಗೌಡ ಪರಿವಾಣ, ಈರಣ್ಣ ದೋತ್ರೆ, ಮಹಾವೀರ ಅಕ್ಕಿ, ಗೌತಮ ಕಡಿಹಳ್ಳಿ, ಪ್ರಶಾಂತ ಗುಗ್ಗೆರಿ, ಸಾಯಬಣ್ಣ ಪುರ್ಲೆ, ನಿಂಗಣ್ಣ ತಿಪನಳ್ಳಿ, ತಿಪ್ಪಣ್ಣ ಕ್ಯಾತನಾಳ, ಪರಶುರಾಮ ನಾಗನಟಗಿ, ರಾಘವೇಂದ್ರ ಹಾರಣಗೇರಾ ಇತರರಿದ್ದರು.