ಕನ್ನಡಪ್ರಭ ವಾರ್ತೆ ಬೆಳಗಾವಿ
ಡೆಕ್ಕನ್ ಅಸೋಸಿಯೇಶನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ (DAPS) ಸಂಸ್ಥೆಯ ಪ್ರಥಮ ಸಮ್ಮೇಳನ ಹಾಗೂ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವು ಇತ್ತೀಚೆಗೆ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.ನವಜಾತ ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಯ ಸೂಕ್ಷ್ಮ ಕ್ಷೇತ್ರದಲ್ಲಿ ಇತ್ತೀಚಿನ ವೈದ್ಯಕೀಯ ಸಾಧನೆಗಳು, ಸಂಕೀರ್ಣ ಪ್ರಕರಣಗಳ ಪ್ರಸ್ತುತೀಕರಣ ಹಾಗೂ ಆಪರೇಷನ್ ಥಿಯೇಟರ್ನಲ್ಲಿ ತಂತ್ರಜ್ಞಾನದ ಹೆಚ್ಚುತ್ತಿರುವ ಪಾತ್ರದ ಕುರಿತು ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಪ್ರಾದೇಶಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಿಶಿಷ್ಟ ವೇದಿಕೆಯಾದ DAPS ಸಂಸ್ಥೆಯು ಬ್ಲ್ಯಾಕ್ ಪರ್ಲ್ಸ್ ಅಂದರೆ ಅತ್ಯಂತ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವಾಗ ವೈದ್ಯರು ತಮ್ಮ ಅಮೂಲ್ಯ ಅನುಭವವನ್ನು ಹಂಚಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತದೆ.ಸಭೆಯಲ್ಲಿ ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ಕಾಂತ್ ಶಾ, ಡಾ.ವಿಜಯ್ ಪಾಟೀಲ್ ಮತ್ತು ಡಾ.ದಿನೇಶ್ ಕಿಟ್ಟೂರು ಸಂಕೀರ್ಣ ಶಸ್ತ್ರಚಿಕಿತ್ಸೆಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಜೆಎನ್ಎಂಸಿ ಹಾಗೂ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಬಾಲ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಕುರ್ಬೇಟ್ ಅವರು ಪ್ಯಾಂಕ್ರಿಯಾಸ್ ಸಂಬಂಧಿತ ಅಪರೂಪದ ಪ್ರಕರಣಗಳು, ಛಾತಿ ಗ್ರಂಥಿಗಳು ಹಾಗೂ ಮಕ್ಕಳ ಎಂಡೋಕ್ರೈನ್ ಶಸ್ತ್ರಚಿಕಿತ್ಸೆಗಳ ಯಶಸ್ವಿ ಅನುಭವ ಕುರಿತು ವಿವರಿಸಿದರು.
ಸಮ್ಮೇಳನದ ಪ್ರಮುಖ ವಿಷಯ ಲರ್ನಿಂಗ್ ಕರ್ವ್ ಅಂದರೆ ಆಧುನಿಕ ಶಸ್ತ್ರಚಿಕಿತ್ಸೆಯಲ್ಲಿ ಕಲಿಕೆಯ ಪ್ರಕ್ರಿಯೆ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವಿಕೆ ಆಗಿತ್ತು. ಮುಂದಿನ ತಲೆಮಾರಿನ ವೈದ್ಯರನ್ನು ಗಮನದಲ್ಲಿಟ್ಟುಕೊಂಡು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೋಬೋಟಿಕ್ ಮತ್ತು ಲ್ಯಾಪರೋಸ್ಕೋಪಿಕ್ ತಂತ್ರಜ್ಞಾನಗಳ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿತ್ತು. ನವಜಾತ ಶಿಶುಗಳ ಶಸ್ತ್ರಚಿಕಿತ್ಸೆಗಳಲ್ಲಿ ಕಡಿಮೆ ಗಾಯದ ವಿಧಾನಗಳನ್ನು ಬಳಸುವಾಗ ಎದುರಾಗುವ ತಾಂತ್ರಿಕ ಸವಾಲುಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ತಜ್ಞರು ಚರ್ಚಿಸಿದರು.
ಈ ವೇಳೆ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯ ಡಾ.ಸ್ವಪ್ನಿಲ್.ಪಿ, ಡಾ.ಅಚ್ಯುತ್ ಶಿವಾಪೂರೆ, ಡಾ.ಬ್ರುಂದಾ.ಕೆ ಉಪಸ್ಥಿತರಿದ್ದರು.ಈ ಸಮಾವೇಶವು ಕಾಹೇರ್ ಸಂಸ್ಥೆಯ ಕುಲಪತಿ ಡಾ.ಪ್ರಭಾಕರ ಕೋರೆ ಮತ್ತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್.ಬಿ.ಕೋರೆ ಅವರ ಆಶ್ರಯದಲ್ಲಿ ನಡೆಯಿತು. ಕಾಹೆರ್ ಉಪಕುಲಪತಿ ಡಾ.ಸಂದೀಪ್ ಶ್ರೀವಾತ್ಸವ, ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಪ್ರಾಚಾರ್ಯ ಡಾ.ರಾಜೇಶ್ ಪವಾರ್ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ದಯಾನಂದ ಅವರ ಸಹಕಾರದಿಂದ ಕಾರ್ಯಕ್ರಮ ನೆರವೇರಿತು.