ಕುಕನೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಇಲಾಖೆಯ ಖಾಸಗೀಕರಣ ವಿರೋಧಿಸಿ ಪಟ್ಟಣದ ಜೇಸ್ಕಾಂ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಇಲಾಖೆಯ ನೌಕರರು ಗುರುವಾರ ಮುಷ್ಕರದ ಪ್ರತಿಭಟನೆ ನಡೆಸಿದರು.
ಮುಷ್ಕರ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಮುಂಬರುವ ಅಧಿವೇಶನದಲ್ಲಿ ವಿದ್ಯುತ್ ಸುಧಾರಣ ಕಾಯ್ದೆ ೨೦೨೬ ಜಾರಿಗೆ ತಂದು ವಿದ್ಯುತ್ ಕಂಪನಿಗಳ ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವುದರಿಂದ ಈಗಾಗಲೇ ಇಲಾಖೆ ನೆಚ್ಚಿಕೊಂಡು ಕೆಲಸ ನಿರ್ವಹಿಸುತ್ತೀರುವ ನೌಕರರಿಗೆ ಮತ್ತು ಕುಟುಂಬಸ್ಥರಿಗೆ ತೊಂದರೆಯಾಗುತ್ತದೆ. ಖಾಸಗೀಕರಣ ನೀತಿಯಿಂದ ಗ್ರಾಹಕರಿಗೂ ಮತ್ತು ರೈತರಿಗೂ ತೊಂದರೆಯಾಗುವ ಉದ್ದೇಶದಿಂದ ಇಂತಹ ಅವೈಜ್ಞಾನಿಕ ಕಾಯ್ದೆ ಜಾರಿ ಮಾಡಿದ್ದೇ ಆದಲ್ಲಿ ಪ್ರೀಪೇಡ್ ಸ್ಮಾರ್ಟ್ ಮೀಟರ್ ಬರುತ್ತದೆ, ರೈತರು, ಗ್ರಾಹಕರು ಮೊದಲು ಬಿಲ್ ಕಟ್ಟಿ ನಂತರ ಸಬ್ಸಡಿ ಪಡೆಯಬೇಕಾಗುತ್ತದೆ. ಖಾಸಗಿ ಕಂಪನಿಯವರು ಮನಬಂದಂತೆ ವಿದ್ಯುತ್ ದರ ನಿಗದಿಪಡಿಸುತ್ತಾರೆ ಮತ್ತು ಸರ್ಕಾರಿ ನೇಮಕಾತಿ ರದ್ದಾಗುತ್ತವೆ. ಈ ಎಲ್ಲ ನೀತಿ ಖಂಡಿಸಿ ನಾವು ರೈತ ಸಂಘದಿಂದ ವಿದ್ಯುತ್ ಇಲಾಖೆಯ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವದಕ್ಕೆ ಬಿಡುವದಿಲ್ಲ ಇವರ ಹೋರಾಟಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆಂದು ಹೇಳಿದರು.ಜೆಸ್ಕಾಂ ಇಲಾಖೆಯ ಎಇ ಮಂಗಳೇಶ, ಎಸ್ಓ ಶರಣಪ್ಪ ಗುಂಡೂರು, ಆಕಾಶ ಬೆಲ್ಲದ, ವಿಜಯ ಕುಮಾರ್ ಚಿಕೊಪ್ಪ, ರೈತ ಸಂಘದ ಪ್ರಧಾನಕಾರ್ಯದರ್ಶಿ ಈಶಪ್ಪ ಸಬರದ್, ಶಿವಪ್ಪ ಸಬರದ, ಬಸಪ್ಪ ಕರೆಣವರ, ಕವಿಪ್ರನಿನಿ ನೌಕರರ ಸಂಘ ಪ್ರಾಥಮಿಕ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯರು ಮತ್ತು ನೌಕರರು ಇದ್ದರು.