ಒಂದೂವರೆ ವರ್ಷದಲ್ಲಿ 2 ಸಾವಿರ ಜನರಿಗೆ ಉದ್ಯೋಗ: ಮಹ್ಮದ್‌ಹನೀಫ್

| Published : Apr 21 2025, 12:45 AM IST

ಒಂದೂವರೆ ವರ್ಷದಲ್ಲಿ 2 ಸಾವಿರ ಜನರಿಗೆ ಉದ್ಯೋಗ: ಮಹ್ಮದ್‌ಹನೀಫ್
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗ ಸಮೃದ್ಧಿ ಕೇಂದ್ರ ದೇಶದ ಪ್ರತಿಷ್ಠಿತ ಉದ್ಯೋಗದಾತ ಸಂಸ್ಥೆಗಳನ್ನು ಇಲ್ಲಿಗೆ ಬರಮಾಡಿಕೊಂಡು ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದೆ. ಒಂದೂವರೆ ವರ್ಷದ ಅವಧಿಯಲ್ಲಿ 2 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ.

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರು ತಾಲೂಕಿನಲ್ಲಿ ನಿರುದ್ಯೋಗ ನಿವಾರಣೆಗೆ ಶ್ರಮ ವಹಿಸಿದ್ದು, ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ಇದುವರೆಗೆ 2 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಸೂಕ್ತ ಮಾರ್ಗದರ್ಶನ ನೀಡಿ, ಅವಕಾಶ ಕಲ್ಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ತಾಪಂ ಕೆಡಿಪಿ ಸದಸ್ಯ ಮಹ್ಮದ್‌ಹನೀಫ್ ಬಂಕಾಪೂರ ತಿಳಿಸಿದರು.ಇಲ್ಲಿನ ಗುರುಭವನದಲ್ಲಿನ ಉದ್ಯೋಗ ಸಮೃದ್ಧಿ ಕೇಂದ್ರದಲ್ಲಿ ಬೆಂಗಳೂರಿವ ಬಿವಿಜಿ ಸಂಸ್ಥೆಯ ಆಶ್ರಯದಲ್ಲಿ ವಾಹನ ಚಾಲಕರಿಗಾಗಿ ಆಯೋಜಿಸಿದ್ದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಸಾಮರ್ಥ್ಯವುಳ್ಳ ಉದ್ಯೋಗಾಕಾಂಕ್ಷಿ ಯುವಕರ ಸಂಖ್ಯೆ ಹೆಚ್ಚಿದೆ. ಅವರಿಗೆ ಸಕಾಲಿಕ ಮಾರ್ಗದರ್ಶನ ಮತ್ತು ಮಾಹಿತಿಯ ಕೊರತೆಯಿತ್ತು. ಅದಕ್ಕಾಗಿಯೇ ಉದ್ಯೋಗ ಸಮೃದ್ಧಿ ಕೇಂದ್ರ ದೇಶದ ಪ್ರತಿಷ್ಠಿತ ಉದ್ಯೋಗದಾತ ಸಂಸ್ಥೆಗಳನ್ನು ಇಲ್ಲಿಗೆ ಬರಮಾಡಿಕೊಂಡು ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದೆ. ಒಂದೂವರೆ ವರ್ಷದ ಅವಧಿಯಲ್ಲಿ 2 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು, ಖುಷಿಯ ವಿಷಯ ಎಂದರು.ಬಿವಿಕೆ ಸಂಸ್ಥೆಯ ವ್ಯವಸ್ಥಾಪಕ ಓಂಕಾರ ಮಾತನಾಡಿ, ಈಗ ಕ್ರಿಯಾಶೀಲತೆ, ಕೆಲಸದ ಸಾಮರ್ಥ್ಯ ಇರುವ ಉದ್ಯೋಗಿಗಳು ಬೇಕಾಗಿದ್ದಾರೆ. ಜವಾಬ್ದಾರಿ ಹಾಗೂ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಒಳ್ಳೆಯ ಅವಕಾಶಗಳಿವೆ. ಅದರ ಸದುಪಯೋಗ ಮಾಡಿಕೊಂಡರೆ ನಿರುದ್ಯೋಗದ ಪ್ರಶ್ನೆಯೇ ಉದ್ಭವಿಸದು. ಕೆಲಸ ಎಲ್ಲಿಯೇ ಆಗಿರಲಿ, ಸುರಕ್ಷಿತ ಸ್ಥಳವಾಗಿದ್ದರೆ ಸಾಕು. ಅಂತಹ ಸುರಕ್ಷಿತ ಉದ್ಯೋಗಕ್ಕಾಗಿ ಸದಾ ನಿಮ್ಮೊಂದಿಗಿದ್ದೇವೆ ಎಂದರು. ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಉದ್ಯೋಗ ಅರಸಿಕೊಂಡು ಅಲೆಯುವ ಬಹುತೇಕರಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಅವಕಾಶಗಳನ್ನು ಕಳೆದುಕೊಳ್ಳುವ ಸಂದರ್ಭಗಳಿವೆ. ಆದರೆ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ಉದ್ಯೋಗ ಸಮೃದ್ಧಿ ಕೇಂದ್ರ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಸುರಕ್ಷಿತ ಸ್ಥಳಗಳಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದರು.ಶಿಕ್ಷಕ ಅನಂತ ಶಿಡೇನೂರ, ಮುಖಂಡರಾದ ಉಮೇಶ ಮಾಳಗಿ, ರಫೀಕ್ ಉಪ್ಪುಣಸಿ, ಬಿವಿಕೆ ಸಂಸ್ಥೆಯ ಅಧಿಕಾರಿ ಪ್ರಕಾಶ ಇದ್ದರು. ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದ 54 ಚಾಲಕರ ಪೈಕಿ 34 ಚಾಲಕರಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಯಿತು.

ವೀರಶೈವ ಲಿಂಗಾಯತ ಭವನಕ್ಕೆ ನಿವೇಶನ ನೀಡಲು ಆಗ್ರಹ

ಶಿಗ್ಗಾಂವಿ: ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ವಿವಿಧೋದ್ದೇಶಗಳಿಗಾಗಿ ಖಾಲಿ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲೂಕು ಘಟಕದ ಪದಾಧಿಕಾರಿಗಳು ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥೆಯು ವೀರಶೈವ ಲಿಂಗಾಯತ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿದೆ. ೨ ಲಕ್ಷಕ್ಕೂ ಹೆಚ್ಚಿನ ಸದಸ್ಯ ಬಲ ಹೊಂದಿರುವ ಸಂಸ್ಥೆ ರಾಜ್ಯ ಘಟಕಗಳು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಸಮಾಜ ರಾಜ್ಯಗಳಲ್ಲಿದೆ. ಸಂಘಟನೆಯಲ್ಲಿ ಸಕ್ರಿಯವಾಗಿವೆ. ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಭವನ ಮತ್ತು ವಿದ್ಯಾರ್ಥಿಗಳ ವಸತಿನಿಲಯ ನಿರ್ಮಿಸುವುದು ಮಹಾಸಭೆಯ ಗುರಿಯಾಗಿದೆ ಎಂದರು.

ಮಹಾಸಭೆಯ ಶಿಗ್ಗಾಂವಿ ತಾಲೂಕು ಘಟಕವು ತಾಲೂಕಿನಲ್ಲಿ ವೀರಶೈವ ಲಿಂಗಾಯತ ಭವನ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಉಚಿತ ವಸತಿನಿಲಯ, ಆಟದ ಮೈದಾನ, ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಭೂಮಿಯ ಅವಶ್ಯವಿದ್ದು, ಪುರಸಭೆ ವತಿಯಿಂದ ನಿವೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ರಾಗಿ, ಡಿ.ಎ. ಗೊಬ್ಬರ ಗುಪ್ಪಿ,ಮಾಲತೇಶ ಯಲಿಗಾರ, ಟಿ.ವಿ. ಸುರಗಿಮಠ, ಸಿದ್ದಣ್ಣ ಮೊರಬದ, ಉಮೇಶಗೌಡ ಪಾಟೀಲ, ಶಶಿಧರ ಸುರಗಿಮಠ, ಚಂದ್ರು ಜವಳಿ, ಜಿ.ಎನ್. ಯಲಿಗಾರ, ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಮಲ್ಲೇಶ ಆರ್. ಇದ್ದರು.